ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಾಗುತಿಹ ಖಾಸಗಿ ದರ್ಬಾರ್‌ !

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವು ನಾಲ್ಕು ಶತಮಾನಗಳಿಗೂ ಹೆಚ್ಚಿನ ಭವ್ಯ ಇತಿಹಾಸವನ್ನು ತನ್ನೊಡಲಲ್ಲಿ ತುಂಬಿಕೊಂಡಿದೆ. ಇಂಥ ವೈಭವದ ನವರಾತ್ರಿ ಉತ್ಸವದ ಮೈಸೂರು ದಸರಾಕ್ಕೆ ಅದರದೇ ಆದ ಪರಂಪರೆಯ ಸೊಗಡು-ಸೊಗಸಿದೆ. ವಿಜಯನಗರ ಅರಸರ ಕಾಲದಲ್ಲಿ ವಿಜಯದ ದ್ಯೋತಕವಾಗಿ ಆರಂಭವಾದ ವಿಜಯದಶಮಿಯ ನವರಾತ್ರಿ, ಸಂಸ್ಕೃತಿ ಸಂಭ್ರಮದ ಉತ್ಸವ.

ಮೈಸೂರು ಒಡೆಯರ ಕಾಲದಲ್ಲಿದು ಮುಂದುವರಿದದ್ದು ಪರಂಪರೆಯ ಪ್ರತೀಕ. ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಇಷ್ಟೊಂದು ಸುದೀರ್ಘ ಕಾಲದವರೆಗೆ ನಡೆಯುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ! ಮೈಸೂರು ದಸರಾ ಒಂದು ನಾಡಹಬ್ಬವೆಂದೇ ಕರೆಯಲಾಗುವ ಮಹೋತ್ಸವವೂ ಹೌದು. ಇದರ ಅತ್ಯಪೂರ್ವ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ಇದನ್ನು ನೋಡಿ ಅನುಭವಿಸಬೇಕೇ ಹೊರತು ಪದಗಳಲ್ಲಿ ಹಿಡಿದಿಡಿದು ವಿವರಿಸಿ ಹೇಳಲು ಸಾಧ್ಯವೇ ಇಲ್ಲ.

ಏಕೆಂದರೆ ಮತ್ತೆ ಮಹಾರಾಜರ ಆಳ್ವಿಕೆಯೇ ಬಂದು ಬಿಡ್ತೇನೋ ಎನ್ನುವಂತೆ ಭಾಸವಾಗಿ, ಸಿಂಹಾಸನಾರೂಢ ಮಹಾರಾಜರ ಗತ್ತು-ಗಾಂಭೀರ್ಯದ ಆಸ್ಥಾನದೈಸಿರಿಯು ಕಣ್ಮುಂದೆ ತೆರೆದುಕೊಳ್ಳುವ ಈ ಭವ್ಯತೆಯನ್ನು, ದಿವ್ಯತೆಯನ್ನು ಸಹಸ್ರ ಕೋಟಿ ಅಕ್ಷರಗಳಿಂದಲೂ ವರ್ಣಿಸಲಸದಳ. ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿಯ ಕಾವ್ಯೋತ್ಸವ, ದಸರಾ ಚಲನಚಿತ್ರೋತ್ಸವ, ದಸರಾ ವಸ್ತುಪ್ರದರ್ಶನ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಯೋಗ ದಸರಾ, ರೈತ ದಸರಾ ಹಲವು ಬಗೆಯ ಟ್ಯಾಬ್ಲೋಗಳೊಡನೆ ಜಂಬೂ ಸವಾರಿಯ ವೈಭವ...

ಹೀಗೆ ಅರಮನೆಯ ಹೊರಗೆ ನಡೆಯುವ ಮೈಸೂರು ದಸರಾ ಎಲ್ಲರೂ ಕಾಣುವ ದಸರೆ. ಆದರೆ ಅರಮನೆಯ ಒಳಗೆ ನಡೆಯುವ ದಸರೆಯೇ ಬೇರೆ. ಇದು ತೀರಾ ಖಾಸಗಿ ದಸರಾ. ಅದೇ ಒಡೆಯರ ಖಾಸಗಿ ದರ್ಬಾರ್. ಇದೇ ಜನ ಸಾಮಾನ್ಯರೆಲ್ಲರಿಗೂ ನೋಡಲು ಸಿಗದ ದಸರಾ. ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಸಾಂಪ್ರದಾಯಿಕವಾಗಿ ಸಕಲ ವಿಧಿ-ವಿಧಾನಗಳೊಂದಿಗೆ ವೈಭವೋಪೇತವಾಗಿ ಜರುಗುತ್ತಿದ್ದ ಈ ಖಾಸಗಿ ದರ್ಬಾರ್‌ನ ಖದರ್ ವಾಹ್ಹ್ ಎಂದು ಬೆರಗುಗೊಳಿಸುವಂಥದ್ದು. ಸಿನಿಮಾಗಳಲ್ಲಿ ಮಾತ್ರ ಕಂಡುಬರುವ ದೇವೇಂದ್ರನ ಅಮರಾವತಿಯ ಒಡ್ಡೋಲಗದ ವೈಭವ-ವೈಭೋಗವೆಲ್ಲವೂ ಇಲ್ಲಿ ನಿಜವಾಗಿ ಮೈದಾಳಿರುತ್ತಿತ್ತು.

ಇದು ನವರಾತ್ರಿ ಮಹೋತ್ಸವದ ಹತ್ತು ದಿನಗಳ ಕಾಲವೂ ನಡೆಯುತ್ತಿದ್ದ ಒಡೆಯರ ಆಸ್ಥಾನದ ಖಾಸಗಿ ದರ್ಬಾರಿನ ಪರಿ.
ಇದಕ್ಕಾಗಿ ಪ್ರಪಂಚದಲ್ಲೇ ಪುರಾತನವಾದದ್ದೆಂದು ಹೇಳಲಾಗುವ ರತ್ನಖಚಿತ ಚಿನ್ನದ ಸಿಂಹಾಸನವನ್ನು ದಸರೆಗೆ ಮೊದಲೇ ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಗುತ್ತಿತ್ತು. ಈ ಸಿಂಹಾಸನ ಜೋಡಣೆಯ ಕೆಲಸ ಮಾಡುತ್ತಿದ್ದವರು ಮೈಸೂರು ಸಮೀಪದ ಗೆಜ್ಜಗಳ್ಳಿ ಗ್ರಾಮದ ಆಯ್ದ ಜನರು ಮಾತ್ರವೇ. ಇದು ದಸರಾ ಆರಂಭದ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ.

ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಒಡೆಯರ್ ಮನೆತನದ ರಾಜ ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ಕಾಲ ಈ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸುತ್ತಿದ್ದುದು ವಾಡಿಕೆ. ಅದರಂತೆ ಮೈಸೂರು ಮಹಾರಾಜರ ಕೊನೆಯ ಕುಡಿ ಯುವರಾಜ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿವರ್ಷ ಇದನ್ನು ನಡೆಸಿಕೊಂಡು ಬರುತ್ತಿದ್ದರು. ಈ ಖಾಸಗಿ ದರ್ಬಾರ್ ಎಂದರೆ ಸಾಕ್ಷಾತ್ ಮಹಾರಾಜರ ಮಹಾವೈಭವ.  ರಾಜಾಳ್ವಿಕೆ ಕೊನೆಗೊಳ್ಳುವ ಮೊದಲು ಮಹಾರಾಜರ ಕಾಲದಲ್ಲಿ ಯಾವ ರೀತಿಯ ರಾಜ ದರ್ಬಾರ್ ನಡೆಯುತ್ತಿತ್ತೋ ಅದೇ ರೀತಿ ಪರಂಪರಾಗತ ವಿಧಿ-ವಿಧಾನಗಳಂತೆಯೇ ಒಡೆಯರ್ ಖಾಸಗಿ ದರ್ಬಾರ್ ನಡೆಸುತ್ತಿದ್ದರು. 

ನವರಾತ್ರಿಯ ಮೊದಲನೆಯ ದಿನ, ಅಂದರೆ ಪಾಡ್ಯದ ದಿನ ಮಹಾರಾಜರಾಗಿ ಖಾಸಗಿ ದರ್ಬಾರ್ ನಡೆಸುತ್ತಿದ್ದ  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಬೆಳಿಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೇ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುತ್ತಿತ್ತು.  ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಒಡೆಯರ್ ಅವರಿಗೆ ಆರತಿ ಬೆಳಗುತ್ತಿದ್ದರು.

ಆನಂತರ ಪೂಜೆಗೆ ಅಣಿಯಾಗುತ್ತಿದ್ದ ಒಡೆಯರ್, ಮೊದಲಿಗೆ ಚಾಮುಂಡಿ ತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಿದ್ದರು. ಒಡೆಯರ್ ಜೊತೆಗೆ ಅವರ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಕೂಡ ರಾಜಮನೆತನದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ತಾವೂ ಕಂಕಣ ಧರಿಸುತ್ತಿದ್ದರು. ಅಲ್ಲಿಂದ ಎಲ್ಲಾ ರೀತಿಯ ಕಠಿಣ ವ್ರತಗಳನ್ನೂ ಅರಮನೆಯ ಸಂಪ್ರದಾಯದಂತೆ ಚಾಚೂ ತಪ್ಪದೆ ನಡೆಸುತ್ತಿದ್ದರು.

ದುರ್ಗೆಯ ದಿವ್ಯಸ್ವರೂಪಗಳಾದ ಬ್ರಹ್ಮಾಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ಎಲ್ಲಾ ಶಕ್ತಿದೇವತೆಗಳನ್ನೂ ಆರಾಧಿಸುವ ಒಡೆಯರ್, ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಇದರ ನಂತರ ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯುತ್ತದೆ. ಬಳಿಕ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳೆಲ್ಲವೂ ಆಗಿ ನಂತರ ಅಷ್ಟೋತ್ತರವಾಗುತ್ತದೆ.

ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಅನೇಕ ಪೂಜಾವಿಧಿಗಳು ಸಾಂಗೋಪವಾಗಿ ನಡೆದು ದೇವೀ ಭಾಗವತವನ್ನು ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತದೆ. ಇದಕ್ಕಾಗಿ ಮರದಿಂದ ಮಹಿಷಾಸುರನ ಪ್ರತಿಕೃತಿಯನ್ನು ತಯಾರಿಸಿ ಅದಕ್ಕೆ ಕುಂಕುಮದ ರಕ್ತವರ್ಣವನ್ನು ಸುರಿಯಲಾಗುತ್ತದೆ.ಈ ಎಲ್ಲಾ ವಿಧಿ-ವಿಧಾನ ಪೂಜೆಗಳ ಜೊತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆತೊಟ್ಟಿಯಲ್ಲಿ ಜೋಡಿಸಿ ಕೂರಿಸಿ ಗೊಂಬೆಯಾರತಿ ಮಾಡಲಾಗುತ್ತದೆ.

ಈ ಸಂಪ್ರದಾಯ ಅರಮನೆಯಿಂದಾಚೆಗೂ ಮುಂದುವರಿದಿದ್ದು ಪಟ್ಟದರಾಜ, ಪಟ್ಟದರಾಣಿ ಪರಿಕಲ್ಪನೆಯಲ್ಲಿ ಗೊಂಬೆ ಕೂರಿಸುವ ಪದ್ಧತಿಯನ್ನು ಈಗಲೂ ದಸರಾ ಸಂದರ್ಭದಲ್ಲಿ ಹಲವಾರು ಮನೆಗಳಲ್ಲಿ ನಾವು ಕಾಣಬಹುದಾಗಿದೆ. ಖಾಸಗಿ ದರ್ಬಾರಿನಲ್ಲಿ ಒಡೆಯರ್ ಅವರ ರಾಜಪೋಷಾಕೇ ಅದ್ಭುತ. ಇದನ್ನು ಮೈಸೂರಿನ ವಿಶಿಷ್ಟ ದರ್ಜಿಯೊಬ್ಬರು ಸಿದ್ಧಪಡಿಸುತ್ತಾರೆ. ಬೆಳಕಿನಲ್ಲಿ ಬೆಳಕಾಗಿ, ಹೊಳಪಿನಲ್ಲಿ ಹೊಳಪಾಗಿ ಮಿರಮಿರ ಮಿರುಗುವ ಚಿನ್ನದ ಎಳೆಗಳನ್ನೊಳಗೊಂಡ ಉಡುಪು ಧರಿಸಿದ ಶ್ರೀಕಂಠದತ್ತರನ್ನು ನೋಡಲು ನೂರು ಕಣ್ಣೂ ಸಾಲದಾಗುತ್ತಿತ್ತು. 

ಹೀಗೆ ಇಡೀ ಅಂಬಾವಿಲಾಸ ಅರಮನೆಯನ್ನು ಬೆಳಗುವ ಚಂದ್ರನಂತೆ ಅರಸೊತ್ತಿಗೆಯ ದಿನಗಳನ್ನು ನೆನಪುಗೊಳಿಸುತ್ತಿದ್ದ ಒಡೆಯರ್ ಸಿಂಹಾಸನ ಪೂಜೆ ಮಾಡಿ ರಾಜಗಾಂಭೀರ್ಯದಿಂದ ರತ್ನಸಿಂಹಾಸನ ಏರಿ ಆ ಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕುಳಿತುಕೊಳ್ಳುತ್ತಿದ್ದ ರೀತಿ ನೋಡುವ ಕಂಗಳಿಗೆ ನಿಜಕ್ಕೂ ಹಬ್ಬವಾಗಿರುತ್ತಿತ್ತು. ಮಹಾರಾಜರೆಂದರೆ ಇವರೇನೇ ಎಂಬ ಭಾವ ಎಂಥವರಿಗಾದರೂ ಬಾರುತ್ತಿತ್ತು. ರಾಜಾಧಿರಾಜ... ರಾಜ ಮಾರ್ತಾಂಡ... ಶ್ರೀಮನ್ಮಹಾರಾಜ... ಬಹುಪರಾಕ್... ಮುಂತಾದ ಪರಾಕುಗಳು ಮೊಳಗತೊಡಗುತ್ತಿದ್ದವು.

ದರ್ಬಾರ್‌ನಲ್ಲಿ ದಿನಕ್ಕೆ ಇಬ್ಬರಂತೆ ಅಧಿಕೃತ ಹೊಗಳು ಭಟರು ಇರುತ್ತಿದ್ದರು.  ಅನಧಿಕೃತವಾಗಿ ಹಲವು ಮಂದಿ ಇದ್ದು ಮಹಾರಾಜರ ಮೇಲಿನ ಅಭಿಮಾನ-ಗೌರವದಿಂದ ಬಹುಪರಾಕ್ ಹಾಕುತ್ತಿದ್ದುದು ಉಂಟು. ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನ ಬೆಳಿಗ್ಗೆಯಿಂದ ಈ ಖಾಸಗಿ ದರ್ಬಾರ್ ನಡೆಯುತ್ತಿತ್ತು. ಉಳಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ನಡೆಯುತ್ತಿತ್ತು. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರೆಲ್ಲರೂ ಖಾಸಗಿ ದರ್ಬಾರಿನಲ್ಲಿರುತ್ತಿದ್ದರು.

ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತಿತ್ತು.  ನಂತರ ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಶುರುವಾಗುತ್ತಿತ್ತು.  ಸಿಂಹಾಸನಾರೂಢರಾಗಿರುತ್ತಿದ್ದ ಒಡೆಯರ್‌ಗೆ ದೇವಾಲಯಗಳಿಂದ ಬಂದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡಿ, ನಜರ್ ಒಪ್ಪಿಸುವುದು ನಡೆಯುತ್ತಿತ್ತು. ನಂತರ ಸಿಂಹಾಸನಾರೂಢ ಒಡೆಯರ್‌ರಿಂದ ರಾಜಪರಿವಾರದ ಮಂದಿಗೆ ಕಾಣಿಕೆ ನೀಡಲಾಗುತ್ತಿತ್ತು. ಹತ್ತು ದಿನಗಳು ನಡೆಯುವ ಈ ಖಾಸಗಿ ದರ್ಬಾರ್‌ನಲ್ಲಿ ದಿನವೂ ನಡೆಯುತ್ತಿದ್ದ ಪೂಜಾ ವಿಧಾನಗಳಲ್ಲಿ ಬದಲಾವಣೆಗಳಿರುತ್ತಿರಲಿಲ್ಲ.


ವಿಜಯದಶಮಿಯ ಹತ್ತು ದಿನಗಳ ಅವಧಿಯಲ್ಲಿ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿಯ ರಾತ್ರಿ ಅಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧ ಶಾಲೆಯಲ್ಲಿ ಆಯುಧಪೂಜೆ, ವಿಜಯದಶಮಿಯ ದಿನ ಜಟ್ಟಿಗಳ ವಜ್ರಮುಷ್ಠಿ ಕಾಳಗ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಖಾಸಗಿ ದರ್ಬಾರಿನ ಹಿನ್ನೆಲೆಯಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸುವುದು ಖಾಸಗಿ ದರ್ಬಾರಿನ ವಿಶೇಷವಾಗಿರುತ್ತಿತ್ತು.

ಮಾರ್ಕಂಡೇಯ ಪುರಾಣದ ಆಧಾರದ ಪೂಜಾ ಪದ್ಧತಿಯುಳ್ಳ ಅರಮನೆಯೊಳಗಿನ ಈ ಖಾಸಗಿ ದಸರಾದಲ್ಲಿ ಅನೇಕ ಬಗೆಯ ವಿಧಿ-ವಿಧಾನಗಳಿವೆ.  ಇಲ್ಲಿಯ ತನಕವೂ ಇವೆಲ್ಲವನ್ನೂ ಒಡೆಯರ್ ಕುಟುಂಬದವರು ಚಾಚೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದರು. ಖಾಸಗಿ ದರ್ಬಾರಿನ ಆ ಹತ್ತು ದಿನಗಳೂ ಪ್ರಜಾನುಷ್ಠಾನಗಳನ್ನು ನಡೆಸಿಕೊಡಲು 57 ಮಂದಿ ಪುರೋಹಿತರು ಪಾಲ್ಗೊಳ್ಳುತ್ತಿದ್ದರೆಂದರೆ ಇದರ ಮಹತ್ವ ಯಾರಿಗಾದರೂ ಅರಿವಾದೀತು.

ನವರಾತ್ರಿ ಸಮಯದಲ್ಲಿ ಮಹಾರಾಜರು ಕಂಕಣಧಾರಿಯಾಯಿತೆಂದರೆ ಮುಗಿಯಿತು, ನವರಾತ್ರಿ ಉತ್ಸವದ ಪೂಜಾವಿಧಿಗಳು ಮುಗಿಯುವ ತನಕವೂ ಅವರು ಎಲ್ಲೂ ಹೋಗುವಂತಿಲ್ಲ. ಅರಮನೆಯಲ್ಲೇ ಪ್ರತಿದಿನವೂ ವ್ರತನಿಷ್ಠರಾಗಿರಬೇಕು. ಬಹಳಷ್ಟು ಕಟ್ಟುನಿಟ್ಟಿನ ಆಚರಣೆಗಳು ಇವರಲ್ಲಿದ್ದರೂ ಉಪವಾಸ ವ್ರತ ಮಾತ್ರ ಇಲ್ಲ. ಅದರಲ್ಲೂ ವಿಶೇಷವಾಗಿ ಒಡೆಯರ್ ವಂಶದಲ್ಲಿ ಗೃಹಸ್ಥರಂತೂ ಉಪವಾಸ ಮಾಡಲೇಬಾರದಂತೆ. ಹಾಗೆಯೇ ಯಾವುದೇ ಪೂಜೆ ಪುನಸ್ಕಾರಗಳಿರಲಿ ಇವರಲ್ಲಿ ಶಂಖ ಊದುವಂತಿಲ್ಲ, ಕೊಂಬು ವಾದ್ಯದ ಸದ್ದು ಮಾಡುವಂತಿಲ್ಲ.  ಇದೆಲ್ಲವನ್ನೂ ಯುದ್ಧದ ಸಂದರ್ಭದಲ್ಲಿ ಮಾತ್ರ ಇವರು ಬಳಸುತ್ತಾರಷ್ಟೆ.

ಒಟ್ಟಿನಲ್ಲಿ ನವರಾತ್ರಿಯ ದಸರಾ ಸಂಭ್ರಮೋಲ್ಲಾಸದಲ್ಲಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರುಗುತ್ತಿದ್ದ ಖಾಸಗಿ ದರ್ಬಾರ್ ಆಳರಸರ ಗತಕಾಲದ ವೈಭವವನ್ನು ತೆರೆದಿಡುವ ನೆನಪುಗಳ ಮಹಾಮೆರವಣಿಗೆಯಾಗಿತ್ತು. ಆದರೆ ಈಗ ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಾನಂತರ ಉತ್ತರಾಧಿಕಾರಿ ಆಯ್ಕೆ ಆಗದಿರುವ ಹಾಗೂ ಅರಮನೆ ಆಸ್ತಿ ವಿವಾದ ಕೋರ್ಟ್‌ನಲ್ಲಿದ್ದು ರಾಜಮನೆತನ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲವಾಗಿ ಈ ಎಲ್ಲಾ ಗೊಂದಲಗಳ ನಡುವೆ ‘ಖಾಸಗಿ ದರ್ಬಾರ್’ ಈ ವರ್ಷ ಇಲ್ಲವಾಗಿ ಒಂದು ರೀತಿ ಇತಿಹಾಸದ ಪುಟದಲ್ಲಿ ಸೇರಿಕೊಳ್ಳುತ್ತಿದೆ. ಇನ್ನು ಒಡೆಯರ ಖಾಸಗಿ ದರ್ಬಾರ್ ಕನಸಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT