ಮುಂಬೈ(ಪಿಟಿಐ): ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ಯಾವುದೇ ದಂಡ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಪಷ್ಟ ಸೂಚನೆ ನೀಡಿದೆ.
ಅರಿವಿಗೆ ಬಾರದೆಯೋ, ನಿರ್ಲಕ್ಷ್ಯದಿಂದಲೋ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲಾಗದೆ ದಂಡ ಪಾವತಿಸುತ್ತಿದ್ದ ಬ್ಯಾಂಕ್ ಗ್ರಾಹಕರಿಗೆ ‘ಆರ್ಬಿಐ’ನ ಈ ನಿರ್ದೇಶನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
‘ಕೆಲವು ಗ್ರಾಹಕರಿಗೆ ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇನ್ನು ಕೆಲವರು ಈ ವಿಚಾರದತ್ತ ಹೆಚ್ಚು ಲಕ್ಷ್ಯ ವಹಿಸಿರುವುದಿಲ್ಲ. ಗ್ರಾಹಕರ ಈ ಪ್ರವೃತ್ತಿಯನ್ನೇ ಬ್ಯಾಂಕುಗಳು ‘ಅವಕಾಶ’ವಾಗಿ ಬಳಸಿಕೊಳ್ಳಬಾರದು. ಇದಕ್ಕಾಗಿ ಯಾವುದೇ ದಂಡವನ್ನೂ ವಿಧಿಸಬಾರದು’ ಎಂದು ‘ಆರ್ಬಿಐ’ ಗವರ್ನರ್ ರಘುರಾಂ ರಾಜನ್ ಮಂಗಳವಾರ ಇಲ್ಲಿ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಣೆ ವೇಳೆ ಹೇಳಿದರು.
‘ಬ್ಯಾಂಕುಗಳು ಬೇಕಿದ್ದರೆ ಇಂತಹ ಖಾತೆಗಳಿಗೆ ಲಭ್ಯವಿರುವ ಸೇವೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದೇ ಹೊರತು ದಂಡ ವಿಧಿಸುವಂತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
3ತಿಂಗಳಿಗೆ ₨ 750 ದಂಡ!: ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಉಳಿತಾಯ ಖಾತೆಗಳಿಗೆ ಯಾವುದೇ ದಂಡ ವಿಧಿಸುತ್ತಿಲ್ಲ. ಆದರೆ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್, ನಗರ ಪ್ರದೇಶದ ಗ್ರಾಹಕರು ₨10 ಸಾವಿರ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ಮೂರು ತಿಂಗಳಿಗೊಮ್ಮೆ ₨750 ದಂಡ ವಿಧಿಸುತ್ತವೆ. ಸಣ್ಣ ನಗರ ಪ್ರದೇಶಗಳ ಗ್ರಾಹಕರು ಖಾತೆಯಲ್ಲಿ ₨5 ಸಾವಿರ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ಬ್ಯಾಂಕ್ ಸೇವೆಗಳನ್ನು ತಡೆ ಹಿಡಿಯಲಾಗುತ್ತದೆ.
ಹೊಸ ಬ್ಯಾಂಕ್ ಶೀಘ್ರ: ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗದ ಸಮ್ಮತಿ ಪಡೆದು ಶೀಘ್ರದಲ್ಲೇ ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ನೀಡಲಾಗುವುದು ಎಂದು ರಾಜನ್ ಹೇಳಿದರು.
ರಾಜಕೀಯ ವಿವಾದ ಉಂಟಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗದ ಪರವಾನಗಿ ಪಡೆದೇ ಪಟ್ಟಿ ಪ್ರಕಟಿಸಲಾಗುವುದು. ಹೀಗಾಗಿ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ‘ಆರ್ಬಿಐ’ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುತ್ತಿದೆ ಎಂಬ ‘ಬಿಜೆಪಿ’ ಟೀಕೆಗೆ ಉತ್ತರಿಸಿದ ಅವರು, ಹೊಸ ಬ್ಯಾಂಕುಗಳ ಸ್ಥಾಪನೆಗೆ ಪರವಾನಗಿ ನೀಡುವುದು ರಾಜಕೀಯ ಪ್ರಕ್ರಿಯೆ ಅಲ್ಲ. ಇದು ಆರ್ಥಿಕ ಪ್ರಕ್ರಿಯೆ. ಇಲ್ಲಿ ಕೆಲವು ನಿಯಂತ್ರಣಗಳಿರುತ್ತವೆ. ಹಾಗಾಗಿ ಆಯೋಗದ ಪರವಾನಗಿ ಪಡೆದುಕೊಳ್ಳಲಾಗುವುದು ಎಂದರು.
‘ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ನೀಡುವ ಪ್ರಕ್ರಿಯೆ ಆರಂಭಗೊಂಡು ಆಗಲೇ ಎರಡು ವರ್ಷಗಳಾಗಿವೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ. ಇದು ಸಂಪೂರ್ಣವಾಗಿ ‘ಆರ್ಬಿಐ’ಗೆ ಬಿಟ್ಟ ವಿಚಾರ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರೂ ಹೇಳಿದ್ದಾರೆ.
ಬಡ್ಡಿದರ ಯಥಾಸ್ಥಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.