ನವದೆಹಲಿ: ಹದಿನಾರನೆ ಲೋಕಸಭೆಯ ಆರಂಭದ ಅಧಿವೇಶನದಲ್ಲೇ ಕರ್ನಾಟಕದ ಸದಸ್ಯರು ಕನ್ನಡದ ಕಂಪು ಪಸರಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆದಿಯಾಗಿ ಬಹುತೇಕರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಿದರು. ಬಿಜೆಪಿ ಸದಸ್ಯ ಅನಂತ ಕುಮಾರ್ ಹೆಗಡೆ ಅವರು ಮಾತ್ರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಮೊದಲಿಗೆ ಹಚ್ಚಿದ ಕನ್ನಡದ ದೀಪವನ್ನು ಉಳಿದವರು ಎತ್ತಿ ಹಿಡಿದರು. ಸಚಿವರಾದ ಅನಂತ ಕುಮಾರ್, ಜಿ.ಎಂ. ಸಿದ್ದೇಶ್ವರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಶೋಭಾ ಕರಂದ್ಲಾಜೆ, ಡಿ.ಕೆ. ಸುರೇಶ್ ಮತ್ತಿತರರು ಕನ್ನಡದ ದೀಪವನ್ನು ಪ್ರಕಾಶಮಾನಗೊಳಿಸಿದರು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪಕ್ಷಾತೀತವಾಗಿ ಕನ್ನಡತನ ಮೆರೆದರು.