ನೆಲಮಂಗಲ: ‘ಸಾಹಿತ್ಯದ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಮನೆ ಮನೆಗಳಿಗೆ ತಲುಪಿಸುತ್ತಿರುವ ಕನ್ನಡ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ’ ಎಂದು ನಿವೃತ್ತ ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಎ.ವೆಂಕಟೇಶಲು ತಿಳಿಸಿದರು.
ಸ್ಥಳೀಯ ಕನ್ನಡ ಗೆಳೆಯರ ಬಳಗ ಪಟ್ಟಣದ ಕೋಟೆ ಬೀದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸಾರಸ್ವತ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗೆಳೆಯರ ಬಳಗದ ಅಧ್ಯಕ್ಷ ಕೆ. ನರಸಿಂಹಮೂರ್ತಿ ಮಾತನಾಡಿ, ‘ಕನ್ನಡ ಸಾಹಿತ್ಯ ಸಾರಸ್ವತ ರಥದಲ್ಲಿ ಕನ್ನಡದ ಸಾಹಿತ್ಯ, ಕಥೆ, ಕಾದಂಬರಿ, ಕವನ ಸಂಕಲನಗಳು ಇದ್ದು ಪಟ್ಟಣದ ಎಲ್ಲ ವಾರ್ಡುಗಳಿಗೂ ಸಂಚರಿಸಿ ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ’ ಎಂದು ತಿಳಿಸಿದರು.