ಮೈಸೂರು: ಕನ್ನಡ ಚಿತ್ರರಂಗ 80 ವಸಂತಗಳನ್ನು ಪೂರೈಸಿ ಇಂದು 81ನೇ ವರ್ಷಕ್ಕೆ (ಮಾರ್ಚ್ 3) ಕಾಲಿಡುತ್ತಿದೆ. ಆದರೆ, ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಚಿತ್ರೋದ್ಯಮ ಇಲ್ಲ. ಏಕೆಂದರೆ, ರಾಜ್ಯದಲ್ಲಿ ಸದ್ಯ ಉಳಿದಿರುವುದು 700 ಥಿಯೇಟರುಗಳು ಮಾತ್ರ.
2000ದ ವರೆಗೆ ರಾಜ್ಯದಲ್ಲಿ 1,200 ಥಿಯೇಟರುಗಳಿದ್ದವು.
ಸದ್ಯ ಉಳಿದಿರುವ ಥಿಯೇಟರುಗಳಲ್ಲೂ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳುವುದಿಲ್ಲ. ಪ್ರತಿ ವಾರ ಬಿಡುಗಡೆಯಾಗುವ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳ ನಡುವೆ 120 ಥಿಯೇಟರುಗಳಲ್ಲಿ ಮಾತ್ರ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಕರ್ನಾಟಕ ವಾಣಿಜ್ಯ ಮಂಡಳಿಯು ಅನ್ಯಭಾಷಾ ಚಿತ್ರಗಳು ರಾಜ್ಯದಾದ್ಯಂತ ಕೇವಲ 21 ಥಿಯೇಟರುಗಳಲ್ಲಿ ಬಿಡುಗಡೆಯಾಗಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
ಆದರೆ, ಕಾರ್ಪೋರೆಟ್ ಕಂಪೆನಿಗಳು ತಡೆಯಾಜ್ಞೆ ತಂದ ಪರಿಣಾಮ ಸದ್ಯ ರಾಜ್ಯದಾದ್ಯಂತ 400–500 ಥಿಯೇಟರುಗಳಲ್ಲಿ ಅನ್ಯಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿವೆ. ಉಳಿದ 250–300 ಥಿಯೇಟರುಗಳಲ್ಲಿ ಕನ್ನಡ ಸಿನಿಮಾಗಳ ಬಿಡುಗಡೆಗಾಗಿ ಹೊಡೆದಾಡಬೇಕು. ಅದರಲ್ಲೂ ಗಡಿಭಾಗಗಳಲ್ಲಿ ಈಗಲೂ ಕನ್ನಡ ಚಿತ್ರಗಳು ಬಿಡುಗಡೆ ಕಾಣುವುದಿಲ್ಲ. ಇದಕ್ಕಾಗಿ ಚಿತ್ರೋದ್ಯಮ ಬೆಳೆಯಬೇಕು, ಕನ್ನಡ ಚಿತ್ರಗಳನ್ನು ಹೆಚ್ಚು ಪ್ರೇಕ್ಷಕರು ನೋಡಬೇಕು ಎನ್ನುವ ಉದ್ದೇಶದಿಂದ 300 ‘ಜನತಾ ಥಿಯೇಟರು’ ಆರಂಭಿಸಬೇಕು ಎಂದು ಕಳೆದ ವರ್ಷದ ಬಜೆಟ್ನಲ್ಲಿ ಸೇರಿಸಲಾಗಿತ್ತು. ಆದರೆ, ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ.
‘ಕನ್ನಡ ಚಿತ್ರೋದ್ಯಮ ಬೆಳೆಯಬೇಕು ಎನ್ನುವ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದೆ. ಈಗ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ತಿರಸ್ಕರಿಸಿದ್ದಾರೆಂದು ಕೇಳಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಮನವರಿಕೆ ಮಾಡಿಕೊಡುವೆ. ಈ ವರ್ಷದ ಬಜೆಟ್ನಲ್ಲಿ ಸೇರಿಸಲು ಒತ್ತಾಯಿಸುವೆ. ಇಲ್ಲದಿದ್ದರೆ ಟಿವಿ ಹಾಗೂ ಇತರ ಭಾಷೆಗಳ ಸಿನಿಮಾ ಹಾವಳಿಯಿಂದ ಈಗಾಗಲೇ ಕನ್ನಡ ಸಿನಿಮಾಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಇದನ್ನು ನಿವಾರಿಸಲು ಜನತಾ ಥಿಯೇಟರುಗಳು ಅವಶ್ಯ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜನತಾ ಥಿಯೇಟರುಗಳು ಆರಂಭವಾದರೆ ₹ 25 ಹಾಗೂ ₹ 50 ವೆಚ್ಚದಲ್ಲಿ ಸಿನಿಮಾ ನೋಡಬಹುದು. 300 ಆಸನಗಳ ಥಿಯೇಟರುಗಳನ್ನು ಕಟ್ಟಿದರೆ ಕಟ್ಟಡ ವೆಚ್ಚದಲ್ಲಿ ಶೇ 25ರಷ್ಟು ಸಬ್ಸಿಡಿ ಸಿಗಲಿದೆ. ಇವುಗಳೊಂದಿಗೆ ಈಗಾಗಲೇ ಇರುವ 1,200 ಆಸನಗಳ ಥಿಯೇಟರುಗಳನ್ನು ಒಡೆದು ಮೂರು ಥಿಯೇಟರುಗಳಾಗಿ ವಿಂಗಡಿಸಿದರೆ ಸಬ್ಸಿಡಿ ಸಿಗುತ್ತದೆ. ಆದರೆ, ಕನ್ನಡ ಸಿನಿಮಾಗಳನ್ನೇ ಕಡ್ಡಾಯವಾಗಿ ಪ್ರದರ್ಶಿಸಬೇಕು. ಇತರ ಭಾಷೆಗಳ ಸಿನಿಮಾಗಳನ್ನು ಪ್ರದರ್ಶಿಸಿದರೆ ಲೈಸೆನ್ಸ್ ರದ್ದುಗೊಳಿಸಬೇಕು ಜತೆಗೆ, ನೀಡಿರುವ ಸಬ್ಸಿಡಿ ವಾಪಸು ಪಡೆಯಬೇಕು ಎನ್ನುವ ನಿಯಮವನ್ನು ರೂಪಿಸಲಾಗಿದೆ.
‘ರಾಜ್ಯದ ವಿವಿದೆಡೆಯಲ್ಲಿಯ ಮಲ್ಟಿಪ್ಲೆಕ್ಸ್ನಲ್ಲಿ 40 ಸ್ಕ್ರೀನ್ಗಳಿವೆ. ಅವುಗಳಿಗೆ ಜೇಬು ಗಟ್ಟಿಯಿದ್ದವರು ಹೋಗಲು ಸಾಧ್ಯ. ಬಡವರಿಗೆ ಹಾಗೂ ಕೆಳಮಧ್ಯಮ ವರ್ಗದ ಪ್ರೇಕ್ಷಕರಿಗೆ ಹಿಂದೆ ಇದ್ದ ಟೂರಿಂಗ್ ಟಾಕೀಸುಗಳು ಬೇಕು. ಇದಕ್ಕೆ ಸರ್ಕಾರ ಮತ್ತೆ ಲೈಸೆನ್ಸ್ ಕೊಡಬೇಕು. ಜನತಾ ಥಿಯೇಟರುಗಳ ಜತೆಗೆ ಟೂರಿಂಗ್ ಟಾಕೀಸುಗಳಾದರೆ ‘ಸಿ’ ಹಾಗೂ ‘ಬಿ’ ಸೆಂಟರ್ನಲ್ಲಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ’ ಎನ್ನುವ ಯೋಜನೆ ಮುಂದಿಡುತ್ತಾರೆ ಬಾಬು.
ಇದರಿಂದ ರಾಜ್ಯದಲ್ಲಿ ಸುಮಾರು 1,200ಕ್ಕೂ ಅಧಿಕ ಥಿಯೇಟರುಗಳು ಹೆಚ್ಚಲಿವೆ. ಆಂಧ್ರಪ್ರದೇಶದಲ್ಲಿ 2,500 ಹಾಗೂ ತಮಿಳುನಾಡಿನಲ್ಲಿ 2,250 ಥಿಯೇಟರುಗಳಿವೆ. ಅಲ್ಲದೆ, ಕಡಿಮೆ ಖರ್ಚಿನಲ್ಲಿ ₹ 25 ಹಾಗೂ ₹ 50 ದರದಲ್ಲಿ ನೋಡಬಹುದಾದ ‘ಅಮ್ಮ ಥಿಯೇಟರು’ಗಳು ತಮಿಳುನಾಡಿನಲ್ಲಿವೆ. ಅಲ್ಲಿ ಕಡ್ಡಾಯವಾಗಿ ತಮಿಳು ಸಿನಿಮಾಗಳನ್ನೇ ಪ್ರದರ್ಶಿಸಲಾಗುತ್ತದೆ.
ಹೀಗೆಯೇ, ರಾಜ್ಯದಲ್ಲಿ ‘ಜನತಾ ಥಿಯೇಟರು’ ಹಾಗೂ ಟೂರಿಂಗ್ ಟಾಕೀಸುಗಳಾಗಿ ಕಡ್ಡಾಯವಾಗಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರು ಖಂಡಿತ ಹೆಚ್ಚಾಗಲಿದ್ದಾರೆ ಮತ್ತು ಚಿತ್ರೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ ಎನ್ನುವುದು ಚಿತ್ರೋದ್ಯಮದ ನಂಬಿಕೆ. ‘ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದರ ಜತೆಗೆ, ಸದಭಿರುಚಿಯ ಸಿನಿಮಾಗಳ ಹೆಚ್ಚಳಕ್ಕೆ ಚಲನಚಿತ್ರ ಅಕಾಡೆಮಿಯಿಂದ ಯತ್ನಿಸಲಾಗುತ್ತದೆ. ಹೀಗೆ, ಪ್ರೇಕ್ಷಕರು ಮತ್ತು ಚಿತ್ರೋದ್ಯಮದ ಸೇತುವೆಯಾಗಿ ಅಕಾಡೆಮಿ ಕೆಲಸ ಮಾಡಲಿದೆ’ ಎನ್ನುವ ವಿಶ್ವಾಸವನ್ನು ರಾಜೇಂದ್ರಸಿಂಗ್ ಬಾಬು ವ್ಯಕ್ತಪಡಿಸಿದರು.
‘ಸತಿ ಸುಲೋಚನ’ ನೆನಪು ಇಂದು
1934ರ ಮಾರ್ಚ್ 3ರಂದು ‘ಸತಿ ಸುಲೋಚನ’ ಸಿನಿಮಾ ಬೆಂಗಳೂರಲ್ಲಿ ಬಿಡುಗಡೆಯಾಗುವ ಮೂಲಕ ಕನ್ನಡ ಚಲನಚಿತ್ರರಂಗ ಅಧಿಕೃತವಾಗಿ ಶುರುವಾಯಿತು. ಇದರ ನೆನಪಿಗಾಗಿ ಇಂದು (ಮಾರ್ಚ್ 3) ಬೆಳಿಗ್ಗೆ 11.30 ಗಂಟೆಗೆ ಬೆಂಗಳೂರಿನ ಬಾದಾಮಿ ಹೌಸ್ನಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕರುಗಳಾದ ಚ.ಹ. ರಘುನಾಥ್ ರಚಿಸಿದ ‘ಸತಿ ಸುಲೋಚನ’ ಹಾಗೂ ಎನ್. ವಿಶಾಖ ಅವರ ‘ಕರ್ನಾಟಕದ ನಿರ್ದೇಶಕಿಯರು’ ಕೃತಿಗಳು ಬಿಡುಗಡೆಯಾಗಲಿವೆ.
– ಎಸ್.ವಿ. ರಾಜೇಂದ್ರಸಿಂಗ್ ಬಾಬು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.