ಮಾಗಡಿ: ತಾಲೂಕಿನ ಕನ್ನಸಂದ್ರ ಬಳಿ ಬಿಬಿಎಂಪಿ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಅಂರ್ತಜಲ ಕಲುಷಿತವಾಗು ತ್ತಿರುವುದರ ವಿರುದ್ಧ ತಹಶೀಲ್ದಾರ್ ಮತ್ತು ಕುದೂರು ಪೊಲೀಸರಿಗೆ ದೂರು ನೀಡಿರುವುದಾಗಿ ಮಾದಿಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆಂಚೇಗೌಡ ತಿಳಿಸಿದರು.
ತಾಲ್ಲೂಕಿನ ಕನ್ನಸಂದ್ರ ಕಾಲೊನಿಯ ಬಳಿ ಇರುವ ಬಿಬಿಎಂಪಿ, ತ್ಯಾಜ್ಯ ಸುರಿ ದಿರುವ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ವಿನಾಗೇಶ್ ಮತ್ತು ರಂಗನಾಥ ಅವರು ತಮ್ಮ ಜಮೀನಿನಲ್ಲಿ ಇಟ್ಟಿಗೆ ಗೂಡು ಆರಂಭಿಸುವುದಾಗಿ 50ಅಡಿ ಆಳದ ಗುಂಡಿ ತೆಗೆದು ಬಿಬಿಎಂಪಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಎಂದು ಕೆಂಚೇಗೌಡ ಆರೋಪಿಸಿದರು.
ಇವರಿಬ್ಬರು ಸಹ ಬಿಬಿಎಂಪಿ ತ್ಯಾಜ್ಯ ಸಾಗಿಸಲು ತಮ್ಮ ಲಾರಿಗಳನ್ನು ಬಾಡಿಗೆ ಬಿಟ್ಟಿದ್ದಾರೆ. ರಂಗನಾಥ್ ಜಮೀನಿನಲ್ಲೆ ಇಟ್ಟಿಗೆ ಗೂಡಿಗೆ ಬಳಸಲು 50ಅಡಿ ಆಳದ ಗುಂಡಿಯಿಂದ ತೆಗೆದ ಮಣ್ಣನ್ನು ಇಟ್ಟಿಗೆ ತಯಾರಿಕೆಗೆ ಬಳಸಿಕೊಂಡಿದ್ದಾರೆ. ಅದೇ ಗುಂಡಿಗಳಲ್ಲಿ ಬಿಬಿಎಂಪಿ ತ್ಯಾಜ್ಯ ತಂದು ಸುರಿದಿದೆ ಎಂದು ಆರೋಪಿಸಿದ ಗ್ರಾ.ಪಂ.ಅಧ್ಯಕ್ಷರು, ಈಭಾಗದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಮಾಲಿನ್ಯವುಂಟು ಮಾಡಲಾಗುತ್ತಿದೆ ಎಂದು ದೂರಿದರು.
ಕನ್ನಸಂದ್ರ ಕಾಲೊನಿಯ ಬಳಿ ಬಿಬಿಎಂಪಿ ತ್ಯಾಜ್ಯ ಸುರಿಯುವುದರಿಂದ 1 ಕಿ.ಮೀ ದೂರದಲ್ಲಿನ ಕರಡಿಗುಚ್ಚಮನ ದೇವಾಲಯಕ್ಕೆ ಬರುವ ಭಕ್ತರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದರು.
ಕನ್ನಸಂದ್ರ ಕಾಲೊನಿಯ ಬಳಿ ಬಿಬಿಎಂಪಿ ತ್ಯಾಜ್ಯ ಸುರಿಸುವುದರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾ.ಪಂ.ಸದಸ್ಯ ಹನುಮಂತರಾಯಪ್ಪ, ಸದಸ್ಯ ಸುರೇಶ್, ಮಾಜಿ ಸದಸ್ಯ ರವಿಕುಮಾರ್, ರಾಜಣ್ಣ, ದಲಿತ ಸಂಘಟನೆಯ ಶ್ರೀನಿವಾಸ್, ಚಿಕ್ಕಣ್ಣ ಇದ್ದರು.
ಕಾಂಗ್ರೆಸ್ ಕ್ರಮಕೈಗೊಳ್ಳಲಿ: ಬೆಂಗಳೂರಿನಿಂದ ಬಿಬಿಎಂಪಿ ಲಾರಿಗಳು ಹಾದು ಬರುವ ಸೋಲೂರು ವೃತ್ತದ ಬಳಿ ಜಿ.ಪಂ.ಸದಸ್ಯಎ.ಮಂಜುನಾಥ್ ಸಿಸಿ ಕ್ಯಾಮೆರಾ ಅಳವಡಿಸಿ, ಲಾರಿಗಳು ಬರುವುದನ್ನು ಪರೀಕ್ಷಿಸಲಿ. ಜಿಲ್ಲಾ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು. ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಒತ್ತಾಯಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.