ನವದೆಹಲಿ (ಪಿಟಿಐ): ಕಪ್ಪು ಹಣ ಪ್ರಕರಣಗಳನ್ನು ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗೆ ನೆರವಾಗಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ.
ನ್ಯಾಯಮೂರ್ತಿ ಬಿ.ಎಸ್. ಚವಾಣ್ ಮತ್ತು ಎ.ಕೆ. ಸಿಕ್ರಿ ಅವರನ್ನು ಒಳಗೊಂಡ ರಜಾ ಕಾಲದ ನ್ಯಾಯಪೀಠವು ವಿಶೇಷ ತನಿಖಾ ತಂಡ ರಚನೆಗೆ ನೀಡಿದ್ದ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸಿದೆ. ಈ ಮೊದಲು ನೀಡಿದ್ದ ಅವಧಿಯು ಗುರುವಾರ ಕೊನೆಗೊಂಡಿದೆ.
ಶಾಸ್ತ್ರಿ ಭವನದಲ್ಲಿ ಇಡಲಾಗಿರುವ ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರ ಹಿರಿಯ ವಕೀಲ ರಾಂ ಜೇಠ್ಮಲಾನಿ ದೂರಿದ್ದರಿಂದ ಎಲ್ಲ ದಾಖಲೆಗಳನ್ನು ಕಂದಾಯ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯು ಸುರಕ್ಷಿತವಾಗಿ ಇಡಬೇಕು ಎಂದು ನ್ಯಾಯಪೀಠ ಆದೇಶಿಸಿತು.
ಆದರೆ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಅವರು ಜೇಠ್ಮಲಾನಿ ಆರೋಪವನ್ನು ತಳ್ಳಿಹಾಕಿದರು. ದಾಖಲೆಗಳು ಶಾಸ್ತ್ರಿ ಭವನಲ್ಲಿ ಇಲ್ಲ, ಅವುಗಳನ್ನು ನಾರ್ಥ್ ಬ್ಲಾಕ್ನಲ್ಲಿ ಇಡಲಾಗಿದೆ ಎಂದು ಹೇಳಿದರು.