ನವದೆಹಲಿ (ಪಿಟಿಐ): ವಿದೇಶದಲ್ಲಿ ಅಕ್ರಮವಾಗಿ ಹಣ ಇಟ್ಟವರು ಹಾಗೂ ₨ 50 ಲಕ್ಷಗಳಿಂತ ಹೆಚ್ಚಿನ ತೆರಿಗೆ ತಪ್ಪಿಸಿಕೊಂಡವರ ಸ್ವದೇಶದಲ್ಲಿರುವ ಆಸ್ತಿಮುಟ್ಟುಗೋಲು ಹಾಕಿಕೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ ಎಂದು ಕಪ್ಪುಹಣಕ್ಕೆ ಸಂಬಂಧಿಸಿದ ‘ವಿಶೇಷ ತನಿಖಾ ತಂಡ’ (ಸಿಟ್) ಹೇಳಿದೆ.
ಸುಪ್ರೀಂಕೋರ್ಟ್ಗೆ ಶುಕ್ರವಾರ ತನ್ನ ಎರಡನೇ ವರದಿ ಸಲ್ಲಿಸಿದ ‘ಸಿಟ್’ 13 ಶಿಫಾರಸುಗಳನ್ನು ಮಾಡಿದೆ. ಒಂದು ಲಕ್ಷ ರೂಪಾಯಿಗೂ ಮೇಲ್ಪಟ್ಟ ಎಲ್ಲ ನಗದು ಹಾಗೂ ಚೆಕ್ ವ್ಯವಹಾರಗಳಲ್ಲೂ ‘ಪಾನ್’ ಕಾರ್ಡ್ ಕಡ್ಡಾಯ. ಅಕ್ರಮ ಹಣದ ವ್ಯವಹಾರವನ್ನು ತಡೆಗಟ್ಟಲು ನಗದು ಇಟ್ಟುಕೊಳ್ಳುವ ಹಾಗೂ ಸಾಗಣೆ ಮಾಡುವ ಮಿತಿಯನ್ನು 10ರಿಂದ 15 ಲಕ್ಷ ರೂಪಾಯಿಗಳಿಗೆ ನಿರ್ಬಂಧಿಸುವುದು ಅವುಗಳಲ್ಲಿ ಕೆಲವು.
ಗಣಿಗಾರಿಕೆ, ಕಬ್ಬಿಣದ ಅದಿರು ರಫ್ತು, ಹಣ ಹೆಚ್ಚಿಸುವ ನಕಲಿ ಸ್ಕೀಮ್ಗಳು, ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ಬೃಹತ್ ಮೊತ್ತದ ಹಣಕಾಸು ವ್ಯವಹಾರ ನಡೆಸುವ ‘ಅಂಗಾಡಿಯಾ’ ವ್ಯವಸ್ಥೆಯಲ್ಲಿ ಕಪ್ಪುಹಣ ಬಳಕೆಯಾಗುತ್ತಿದೆ ಎಂಬುದನ್ನು ಸಿಟ್ ವಿವರಿಸಿದೆ.
₨50 ಲಕ್ಷಗಳಿಂತ ಹೆಚ್ಚಿನ ತೆರಿಗೆ ವಂಚಿಸುವುದು ಅಪರಾಧವಾಗಿದ್ದು, ಅಕ್ರಮ ಹಣ ಚಲಾವಣೆ ತಡೆ ಕಾಯ್ದೆ ಅನ್ವಯ (ಪಿಎಂಎಲ್ಎ) ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬಹುದಾಗಿದೆ ಎಂದೂ ಸಿಟ್ ಹೇಳಿದೆ. ರಪ್ತು ಹಾಗೂ ಆಮದು ದತ್ತಾಂಶಗಳನ್ನು ಇತರ ದೇಶಗಳ ದತ್ತಾಂಶಗಳ ಜತೆ ತ್ರೈಮಾಸಿಕವಾಗಿ ಹೋಲಿಕೆ ಮಾಡಬೇಕು.
₨ 4,479 ಕೋಟಿ ಠೇವಣಿ
ಒಬ್ಬನೇ ವ್ಯಕ್ತಿ ಬೇರೆಬೇರೆ ಹೆಸರಿನಲ್ಲಿ ಹಣಕಾಸು ವ್ಯವಹಾರ ಮಾಡುವುದನ್ನು ತಪ್ಪಿಸಲು ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ಎಂಬ ನೋಂದಣಿ ಪುಸ್ತಕ ನಿರ್ವಹಣೆ ಮಾಡಬೇಕು ಎಂದೂ ಸಿಟ್ ಅಭಿಪ್ರಾಯಪಟ್ಟಿದೆ.