ನವದೆಹಲಿ (ಪಿಟಿಐ): ವಿದೇಶಗಳಲ್ಲಿ ಭಾರತೀಯರು ಇರಿಸಿದ್ದಾರೆ ಎನ್ನಲಾದ ಕಪ್ಪುಹಣವನ್ನು ಸ್ವದೇಶಕ್ಕೆ ವಾಪಸು ತರುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ.
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ನ ನಿವೃತ್ತ ನ್ಯಾ. ಎಂ.ಬಿ. ಷಾ ಅಧ್ಯಕ್ಷತೆಯಲ್ಲಿ ರಚಿಸಿರುವ ಎಸ್ಐಟಿಗೆ ಮತ್ತೊಬ್ಬ ನಿವೃತ್ತ ನ್ಯಾ. ಅರಿಜಿತ್ ಪಸಾಯತ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕಂದಾಯ ಸಚಿವಾಲಯದ ಕಾರ್ಯದರ್ಶಿ, ಸಿಬಿಐ ಮತ್ತು ಗುಪ್ತಚರ ದಳದ ನಿರ್ದೇಶಕರು, ಜಾರಿ ನಿರ್ದೇಶನಾಲಯದ ಉನ್ನತ ಅಧಿಕಾರಿ, ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರು, ಭಾರತೀಯ ರಿಸರ್ವ್ ಬ್ಯಾಂಕ್ನ ಉಪಗೌರ್ನರ್ ಅವರು ಎಸ್ಐಟಿ ಸದಸ್ಯರಾಗಿರುತ್ತಾರೆ ಎಂದು ಒಂದೂವರೆ ತಾಸುಗಳ ಕಾಲ ನಡೆದ ಸಂಪುಟ ಸಭೆಯ ನಂತರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಪ್ಪುಹಣ ಕುರಿತ ಎಲ್ಲ ಪ್ರಕರಣಗಳ ಮೇಲ್ವಿಚಾರಣೆಗಾಗಿ ವಾರದೊಳಗೆ (ಮೇ 28) ಎಸ್ಐಟಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕಳೆದ ವಾರ ಸರ್ಕಾರಕ್ಕೆ ಗಡುವು ನೀಡಿತ್ತು. ಕಪ್ಪುಹಣದ ವಿರುದ್ಧ ಹೋರಾಟಕ್ಕೆ ಸಮಗ್ರ ಕ್ರಿಯಾ ಯೋಜನೆ ನೀಡುವ ಎಸ್ಐಟಿ, ಇಂತಹ ಪ್ರಕರಣಗಳ ತನಿಖೆಗೆ ಕಾಯಂ ಆದ ಸಾಂಸ್ಥಿಕ ವ್ಯವಸ್ಥೆಯನ್ನು ಶಿಫಾರಸು ಮಾಡುತ್ತದೆ. ಜೊತೆಗೆ, ತನಗೆ ವಹಿಸಿರುವ ಕೆಲಸದ ಪ್ರಗತಿ ಬಗ್ಗೆ ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸುತ್ತದೆ.