ಭಾರತೀಯರು ಹೊಂದಿರುವ ರಹಸ್ಯ ಬ್ಯಾಂಕ್ ಖಾತೆಗಳ ಕುರಿತು ಮಾಹಿತಿ ನೀಡಲು ಹಿಂದೇಟು ಹಾಕುವ ಮೂಲಕ ಸ್ವಿಟ್ಜರ್ಲೆಂಡ್ ಸರ್ಕಾರ ಮತ್ತೆ ಅಸಹಕಾರ ಧೋರಣೆ ತಳೆದಿದೆ. ಸ್ವಿಟ್ಜರ್ಲೆಂಡ್ನ ಈ ನಿಲುವಿನ ವಿರುದ್ಧ ‘ಜಿ–20’ ಸೇರಿದಂತೆ ಬಹುರಾಷ್ಟ್ರೀಯ ವೇದಿಕೆಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಭಾರತ ಎಚ್ಚರಿಸಿದೆ.
ವ್ಯತಿರಿಕ್ತ ನಿಲುವು: ಕಪ್ಪು ಹಣದ ಸ್ವರ್ಗ ಎಂದೇ ವಿಶ್ವದಾದ್ಯಂತ ಕುಖ್ಯಾತಿಗೆ ಪಾತ್ರವಾಗಿರುವ ತನ್ನ ಬ್ಯಾಂಕ್ಗಳಲ್ಲಿನ ಠೇವಣಿಗಳ ಬಗ್ಗೆ ದೀರ್ಘಕಾಲದವರೆಗೆ ಕಾಪಾಡಿಕೊಂಡು ಬಂದಿರುವ ಗೋಪ್ಯತೆ ಬಹಿರಂಗಪಡಿಸಲು ಮತ್ತು ಸಂಬಂಧಿತ ದೇಶಗಳ ಜತೆ ಖಾತೆಗಳ ವಿವರ ಹಂಚಿಕೊಳ್ಳಲು ಸ್ವಿಟ್ಜರ್ಲೆಂಡ್್ ಸರ್ಕಾರ ಇತ್ತೀಚೆಗಷ್ಟೇ ನಿರ್ಧರಿಸಿತ್ತ. ಈಗ ಅದಕ್ಕೆ ವ್ಯತಿರಿಕ್ತ ನಿಲುವು ತಳೆದಿದೆ.
ಭಾರತೀಯರು ಸ್ವಿಟ್ಜರ್ಲೆಂಡ್ನ ವಿವಿಧ ಬ್ಯಾಂಕ್ಗಳಲ್ಲಿ ಇರಿಸಿರುವ ಕಪ್ಪು ಹಣದ ಠೇವಣಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು 2009ರಲ್ಲಿಯೇ ಕೈಗೊಂಡ ನಿರ್ಧಾರ ಮತ್ತು ಬ್ಯಾಂಕ್ ಖಾತೆಗಳ ರಹಸ್ಯ ಕಾಯ್ದುಕೊಳ್ಳುವುದನ್ನು ಕೈಬಿಟ್ಟಿರುವುದಾಗಿ ಹೇಳಿದ್ದನ್ನು ಹಣಕಾಸು ಸಚಿವ ಪಿ. ಚಿದಂಬರಂ ಅವರು ಸ್ವಿಟ್ಜರ್ಲೆಂಡ್ಗೆ ಪತ್ರ ಬರೆದು ನೆನಪಿಸಿದ್ದಾರೆ.
ಭಾರತ ಕೇಳಿದ್ದ ಮಾಹಿತಿಗೆ ಸಂಬಂಧಿಸಿದಂತೆ ಒಟ್ಟು 562 ಪ್ರಕರಣಗಳಲ್ಲಿ ಸ್ವಿಟ್ಜರ್ಲೆಂಡ್ ಭಾರತದ ಮನವಿ ತಳ್ಳಿ ಹಾಕಿದೆ. ಸ್ವಿಟ್ಜರ್ಲೆಂಡ್ನ ಎಚ್ಎಸ್ಬಿಸಿ ಯಲ್ಲಿ ಖಾತೆ ಹೊಂದಿರುವ 782 ಮಂದಿ ಭಾರತೀಯರ ಹೆಸರುಗಳ ವಿವರವು ಭಾರತ ಸರ್ಕಾರದ ಬಳಿ ಇದೆ.
ಸಂಸದರ ಮನವೊಲಿಕೆ: ಅಂತರರಾಷ್ಟ್ರೀಯವಾಗಿ ಸ್ವೀಕಾರ್ಹವಾದ ನಿಯಮಗಳನ್ನು ಪಾಲಿಸಲು ಸ್ವಿಟ್ಜರ್ಲೆಂಡ್ ಸರ್ಕಾರವು ತನ್ನ ಸಂಸತ್ ಸದಸ್ಯರ ಮನವೊಲಿಸಬೇಕಾಗಿದೆ. ಭಾರತದ ಮುಂದಿರುವ ಮಾರ್ಗ: ಸ್ವಿಟ್ಜರ್ಲೆಂಡ್ವನ್ನು ‘ಅಸಹಕಾರ ದೇಶ' ಎಂದು ಭಾರತ ಘೋಷಿಸಬಹುದು. ಸ್ವಿಟ್ಜರ್ಲೆಂಡ್ನಲ್ಲಿ ಇರುವ ಠೇವಣಿಗಳ ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಬಹುದಾಗಿದೆ. ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದದಡಿ ದೊರೆಯುವ ಲಾಭಗಳಿಗೆ ಕತ್ತರಿ ಹಾಕಬಹುದು.
‘ಜಿ-20' ನಿರ್ಣಯ: 2009ರಲ್ಲಿ ನಡೆದ ಜಿ–20 ರಾಷ್ಟ್ರಗಳ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ, ಬ್ಯಾಂಕ್ ಖಾತೆಗಳ ಮಾಹಿತಿ ನೀಡದೆ ಇದ್ದರೆ ಅಂತಹ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ಹೇರಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.