‘ಮಾತೃಭಾಷಾ ಶಿಕ್ಷಣದಿಂದ ಅಸಮಾನತೆ...’ ಎಂದಿದ್ದಾರೆ ಪ್ರಿಯಾ ದತ್ (ಪ್ರ.ವಾ., ಜ. 31). ಇದು ಅಪಕ್ವ ಅಭಿಪ್ರಾಯ. ತಾಯಿನುಡಿ ಇಲ್ಲವೇ ಪರಿಸರ ಭಾಷೆಗೆ ಹೊರತಾದ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಮಗುವಿಗೆ ಅದು ಕಬ್ಬಿಣದ ಕಡಲೆಯಾಗುತ್ತದೆ. ಮಗು ನಿರಾಶೆಗೆ ಒಳಗಾಗಿ ಮನೋವ್ಯಾಕುಲತೆಯನ್ನು ಅನುಭವಿಸುವಂತಾಗುತ್ತದೆ.
ಇಂಗ್ಲಿಷ್ ಭಾಷೆ ಬೇಕು. ಆದರೆ ಅದನ್ನೊಂದು ಭಾಷೆಯಾಗಿ ಕಲಿಯಬೇಕೆ ಹೊರತು ಶಿಕ್ಷಣದ ಮಾಧ್ಯಮವಾಗಿ ಅಲ್ಲ. ಮಹಾತ್ಮ ಗಾಂಧಿ ಅವರಿಂದ ಹಿಡಿದು ಸಿ.ಎನ್.ಆರ್. ರಾವ್ ಅವರಂಥ ವಿಜ್ಞಾನಿಗಳು ಕೂಡ ಅಂಥ ಕಾರಣಕ್ಕಾಗಿಯೇ ಮಾತೃಭಾಷಾ ಶಿಕ್ಷಣ ಬೇಕೆಂದು ಪ್ರತಿಪಾದಿಸಿರುವುದು. ಅಂಥ ಮೇದಾವಿಗಳ ಅಭಿಪ್ರಾಯವನ್ನು ಪ್ರಿಯಾ ದತ್ ಅವರಂಥವರು ಅನುಸಂಧಾನಿಸಬೇಕಿದೆ.