ಪಣಜಿ (ಪಿಟಿಐ): ಕರ್ನಾಟಕವನ್ನು ಗೋವಾದ ‘ದೊಡ್ಡಣ್ಣ’ ಎಂದು ಅಲ್ಲಿನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಬಣ್ಣಿಸಿದ್ದಾರೆ. ಮಹಾದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ನೆರೆಯ ರಾಜ್ಯವನ್ನು ‘ಶತ್ರು’ವಿನಂತೆ ನೋಡಬಾರದು ಎಂದು ಅವರು ಹೇಳಿದ್ದಾರೆ.
‘ಕೆಲವು ರಾಜಕೀಯ ಶಕ್ತಿಗಳು ಉದ್ವಿಗ್ನ ಸ್ಥಿತಿ ನಿರ್ಮಿಸಲು ಮತ್ತು ಜನರನ್ನು ಪ್ರಚೋದಿಸಲು ಯತ್ನಿಸುತ್ತಿವೆ. ಆದರೆ ಅದಕ್ಕೆ ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ ಎಂದು ಪರ್ಸೇಕರ್ ಹೇಳಿದ್ದಾರೆ.
ಮಹಾದಾಯಿ ನೀರು ಹಂಚಿಕೆ ನ್ಯಾಯಮಂಡಳಿಯ ಮಧ್ಯಂತರ ತೀರ್ಪಿನಿಂದ ಕರ್ನಾಟಕದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಹಾಗಾಗಿ, ಕರ್ನಾಟಕದಲ್ಲಿರುವ ಗೋವಾದ ಜನರ ಸುರಕ್ಷತೆ ಬಗ್ಗೆ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕ ರೋಹನ್ ಖಾಂತೆ ಅವರು ಎತ್ತಿರುವ ಪ್ರಶ್ನೆಗೆ ಮುಖ್ಯಮಂತ್ರಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ದಿಗಿಲಾಗುವ ಅಗತ್ಯ ಇಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿರುವ ಗೋವಾದ ಜನರ ಸುರಕ್ಷತೆ ಬಗ್ಗೆ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ಇದನ್ನೊಂದು ಅಂತರರಾಜ್ಯ ಜಗಳವಾಗಿ ಪರಿವರ್ತಿಸುವುದು ಬೇಡ. ಇದು ಒಂದು ನಿರ್ದಿಷ್ಟ ವಿಷಯದ ಬಗೆಗಿನ ಕಾನೂನು ಹೋರಾಟ’ ಎಂದು ಅವರು ತಿಳಿಸಿದ್ದಾರೆ.