ಬೆಂಗಳೂರು: ಪಂದ್ಯದ ಆರಂಭ ದಿಂದಲೇ ರೈಡಿಂಗ್ ಮತ್ತು ರಕ್ಷಣಾ ವಿಭಾಗದಲ್ಲಿ ಪ್ರಾಬಲ್ಯ ಮರೆದ ಕರ್ನಾಟಕ ಪುರುಷರ ಮತ್ತು ಮಹಿಳಾ ತಂಡಗಳು 63ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಷಿಪ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿವೆ.
ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಲ್ಲೇಶ್ವರಂನ ಕ್ರೀಡಾಂಗಣದಲ್ಲಿ ಸೇರಿದ್ದ ಕಬಡ್ಡಿ ಪ್ರೇಮಿಗಳಿಗೆ ರಾಜ್ಯದ ಆಟಗಾರರು ಭರ್ಜರಿ ಖುಷಿ ಕೊಟ್ಟರು. ರಾಜ್ಯದ ಪುರುಷರ ತಂಡ 27–22 ಪಾಯಿಂಟ್ಸ್ನಿಂದ ಉತ್ತರಖಾಂಡ ಎದುರು ಗೆಲುವು ಸಾಧಿಸಿತು. ವಿಜಯೀ ತಂಡ ಮೊದಲರ್ಧ ಮುಗಿದಾಗ 21–18ರಲ್ಲಿ ಮುನ್ನಡೆ ಹೊಂದಿತ್ತು. ಎರಡನೇ ಅವಧಿಯ ಆಟದಲ್ಲಿ ಉಭಯ ತಂಡ ಗಳಿಂದ ಹೆಚ್ಚು ಪಾಯಿಂಟ್ಸ್ ಬರಲಿಲ್ಲ.
ಕಬಡ್ಡಿ ಲೀಗ್ನಲ್ಲಿ ಆಡಿದ್ದ ಪ್ರಶಾಂತ್ ರೈ 12 ರೈಡಿಂಗ್ ಪಾಯಿಂಟ್ಸ್ ಮತ್ತು ರಾಜಗುರು ನಾಲ್ಕು ಪಾಯಿಂಟ್ಸ್ ಕಲೆ ಹಾಕಿ ರಾಜ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕ ಮಹಿಳಾ ತಂಡ 22–14 ಪಾಯಿಂಟ್ಸ್ನಿಂದ ಬಂಗಾಳ ಅಮೆಚೂರ್ ಕಬಡ್ಡಿ ಸಂಸ್ಥೆ ಎದುರು ಜಯಭೇರಿ ಮೊಳಗಿಸಿತು.
ಉಷಾರಾಣಿ ನಾಯಕತ್ವದ ರಾಜ್ಯ ತಂಡ ಮೊದಲರ್ಧ ಮುಗಿದಾಗ 12 ಪಾಯಿಂಟ್ಸ್ ಮತ್ತು ಎದುರಾಳಿ ತಂಡ ಏಳು ಪಾಯಿಂಟ್ಸ್ ಹೊಂದಿತ್ತು. ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ ಆಡಿದ್ದ ಸುಷ್ಮಿತಾ ಪವಾರ್ ಎಂಟು ಮತ್ತು ಉಷಾ ಆರು ಪಾಯಿಂಟ್ಸ್ ಕಲೆ ಹಾಕಿ ಗೆಲುವಿಗೆ ಕಾರಣರಾದರು.
ಏಳು ದಿನಗಳ ಚಾಂಪಿಯನ್ಷಿಪ್ನಲ್ಲಿ ಪುರುಷರ ವಿಭಾಗದಲ್ಲಿ 32 ಮತ್ತು ಮಹಿಳಾ ವಿಭಾಗದಲ್ಲಿ 30 ತಂಡಗಳು ಪಾಲ್ಗೊಂಡಿವೆ. ಕರ್ನಾಟಕ ಪುರುಷರ ತಂಡ ‘ಈ’ ಗುಂಪಿನಲ್ಲಿದೆ. ಮಹಾರಾಷ್ಟ್ರ, ಉತ್ತರಖಾಂಡ, ಪಶ್ಚಿಮ ಬಂಗಾಳ ಮತ್ತು ಬಿಎಸ್ಎನ್ಎಲ್ ತಂಡಗಳೂ ಇದೇ ಗುಂಪಿನಲ್ಲಿವೆ.
ಕರ್ನಾಟಕ ಮಹಿಳಾ ತಂಡ ‘ಎಫ್’ ಗುಂಪಿನಲ್ಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಚಂಡೀಗಡ ಮತ್ತು ಬಂಗಾಳ ಅಮೆಚೂರ್ ಕಬಡ್ಡಿ ಸಂಸ್ಥೆ ತಂಡಗಳು ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.