ನವದೆಹಲಿ (ಪಿಟಿಐ): ಮತಾಂತರ ಕುರಿತಂತೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ ಸಚಿವರು ಮತ್ತು ಸಂಸದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ನಿರಾಕರಿಸಿದ್ದೇ ರಾಜ್ಯ ಸಭೆಯ ಕಲಾಪಗಳಿಗೆ ಅಡ್ಡಿಯುಂಟಾಗಲು ಕಾರಣ ಎಂದು ಸಿಪಿಐ (ಎಂ) ಆರೋಪಿಸಿದೆ.
ಸಾಂವಿಧಾನಿಕ ಹೊಣೆ ಮತ್ತು ಭಾರತೀಯ ದಂಡ ಸಂಹಿತೆಯನ್ನು ಉಲ್ಲಂಘಿಸಿದವರನ್ನು, ಅದರಲ್ಲೂ ಬಿಜೆಪಿಯ ಸಚಿವರು ಮತ್ತು ಸಂಸದರನ್ನು ಅವರ ಅಪರಾಧಕ್ಕಾಗಿ ಶಿಕ್ಷಿಸಬೇಕು ಎಂದು ಪಕ್ಷದ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲು ಪ್ರಧಾನಿ ನಿರಾಕರಿಸಿದರು. ಇದೇ ರಾಜ್ಯ ಸಭೆಯ ಕಲಾಪ ಭಂಗಗೊಳ್ಳಲು ಕಾರಣ ಎಂದು ಅವರು ವಿಶ್ಲೇಷಿಸಿದರು.
‘ಈ ಗಲಭೆಗಳಿಗೆ ಪ್ರಚೋದನೆ ನೀಡುವ ಮೂಲಕ ಗುಪ್ತ ಹಿಂದುತ್ವ ಕಾರ್ಯಸೂಚಿ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂಸದರು, ಸಚಿವರು ಮತ್ತು ವಕ್ತಾರರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಇದಕ್ಕೆ ವಿರೋಧ ಪಕ್ಷಗಳನ್ನು ದೂರುತ್ತಿದೆ’ ಎಂದರು.