ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಖಾತೆಯನ್ನು ನಿರ್ವಹಿಸುತ್ತಿದ್ದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತನಿಖೆಗೆ ಒಳಪಡಿಸಲು ಅನುಮತಿ ಸಿಕ್ಕಿರಲಿಲ್ಲ ಎಂದು ಸಿಬಿಐ ಮಂಗಳವಾರ ವಿಶೇಷ ನ್ಯಾಯಾಲಯದಲ್ಲಿ ಹೇಳಿದೆ.
ಆಗ ಕಲ್ಲಿದ್ದಲು ಸಚಿವರಾಗಿದ್ದವರನ್ನು ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ನಿಮಗೆ ಅನ್ನಿಸಲಿಲ್ಲವೇ? ಹಗರಣ ಸಂಬಂಧ ಸ್ಪಷ್ಟಚಿತ್ರಣ ಪಡೆಯಲು ಅವರ ಹೇಳಿಕೆ ಅಗತ್ಯ ಎಂದು ನಿಮಗೆ ಅನ್ನಿಸುವುದಿಲ್ಲವೇ?– ಎಂದು ಸಿಬಿಐ ನ್ಯಾಯಾಧೀಶ ಭರತ್ ಪರಾಶರ್ ಅವರು ತನಿಖಾ ಸಂಸ್ಥೆಯ ಅಧಿಕಾರಿಯನ್ನು ಕೇಳಿದರು.
ಹೆಸರಾಂತ ಉದ್ಯಮಿ ಕೆ.ಎಂ.ಬಿರ್ಲಾ, ಪ್ರಧಾನಿ ಕಚೇರಿಯ ಅಧಿಕಾರಿಗಳು, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ.ಪಾರಖ್ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಆದರೆ ಕಲ್ಲಿದ್ದಲು ಸಚಿವರ ಹೇಳಿಕೆ ಅಗತ್ಯವಿದೆ ಎಂದು ಅನ್ನಿಸಲಿರಲಿಲ್ಲ ಎಂದು ತನಿಖಾಧಿಕಾರಿ ಮಂಗಳವಾರ ವಿಚಾರಣೆ ವೇಳೆ ಸಮರ್ಥಿಸಿಕೊಂಡರು. ಇದೇ ವೇಳೆ, ಆಗ ಕಲ್ಲಿದ್ದಲು ಸಚಿವರಾಗಿದ್ದವರನ್ನು (ಮನಮೋಹನ್ ಸಿಂಗ್) ತನಿಖೆಗೆ ಒಳಪಡಿಸಲು ಅನುಮತಿ ಸಿಕ್ಕಿರಲಿಲ್ಲ ಎಂಬುದನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.