ಬಾಗಲಕೋಟೆ: ಗಣಪತಿ ಮೂರ್ತಿಯನ್ನು ಕೊಂಡೊಯ್ಯತ್ತಿದ್ದ ಸಂದರ್ಭದಲ್ಲಿ ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಅಹಿತಕರ ಘಟನೆ ಶುಕ್ರವಾರ ಇಲ್ಲಿಯ ದುರ್ಗಾ ನಗರದಲ್ಲಿ ನಡೆದಿದೆ. ಪೊಲೀಸರು 13 ಜನ ದುಷ್ಕರ್ಮಿಗಳನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಯುವಕರ ಗುಂಪೊಂದು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ಮೆರವಣಿಗೆ ಮೂಲಕ ಕೊಂಡೊಯ್ಯವ ಸಂದರ್ಭದಲ್ಲಿ ಹಚ್ಚಿದ ಪಟಾಕಿ ಸಿಡಿದು ಪ್ರಾರ್ಥನಾ ಮಂದಿರದ ಒಳಗೆ ಹೋದ ಕಾರಣ, ಅಲ್ಲಿದ್ದ ಕೆಲವರು ಉದ್ರಿಕ್ತಗೊಂಡು ಮೆರವಣಿಗೆ ಮೇಲೆ ಇಟ್ಟಿಗೆಗಳನ್ನು ತೂರಿದರು.
ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಇಟ್ಟಿಗೆಗಳನ್ನು ತೂರಿದರು. ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನವನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.