ಲಖನೌ (ಪಿಟಿಐ): ಸಂಸತ್ತನ್ನು ಅಪರಾಧಿಗಳಿಂದ ಮುಕ್ತಗೊಳಿಸುವುದಾಗಿ ಹೇಳಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹರಿಹಾಯ್ದಿದ್ದಾರೆ.
‘ಮೋದಿ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಜನ ಇನ್ನೂ ಎಚ್ಚರವಾಗಿರಬೇಕು. ನಾನು ಪ್ರಧಾನಿಯಾದರೆ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ, ಅಪರಾಧ ಪ್ರಕರಣ ಎದುರಿಸುತ್ತಿರುವ ಸಂಸದರ ವಿರುದ್ಧ ವಿಶೇಷ ತನಿಖಾ ತಂಡ ರಚನೆ ಹಾಗೂ ಸಂಸತ್ತನ್ನು ಅಪರಾಧಿಗಳಿಂದ ಮುಕ್ತಗೊಳಿಸುವುದಾಗಿ ಮೋದಿ ಸೋಮವಾರ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ‘ಉಲ್ಟಾ ಚೋರ್ ಕೊತ್ವಾಲ್ ಕೊ ಡಾಟೆ’ (ಕಳ್ಳನೇ ಮನೆ ಕಾವಲುಗಾರನಿಗೆ ಬಯ್ದಂತೆ) ಎಂಬಂತೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನಿಜವಾಗಿಯೂ ಹೇಳುವುದಾದರೆ, ಕಳಂಕಿತರು, ಭ್ರಷ್ಟರು, ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಮೋದಿಯವರ ಬಿಜೆಪಿಯಲ್ಲಿದ್ದಾರೆ. ಇದು ಬಿಜೆಪಿಯಲ್ಲಿ ಅತೃಪ್ತಿಗೆ ಕಾರಣವಾಗಿದೆ. ಮೋದಿಯವರು ಈ ರೀತಿಯ ಹೇಳಿಕೆಗಳನ್ನು ನೀಡುವುದಕ್ಕೂ ಮುನ್ನ ಅವರ ಪಕ್ಷದಲ್ಲಿ ಚರ್ಚೆಯಾಗಬೇಕು’ ಎಂದು ಮಾಯಾವತಿ ಹೇಳಿದ್ದಾರೆ.
‘ಎನ್ಡಿಎ ಸರ್ಕಾರ ನನ್ನನ್ನು ತಾಜ್ ಕಾರಿಡಾರ್, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಲುಕಿಸಿತ್ತು. ಆದರೆ, ಸುಪ್ರೀಂಕೋರ್ಟ್ನಿಂದ ನನಗೆ ನ್ಯಾಯ ದೊರೆಯಿತು’ ಎಂದಿದ್ದಾರೆ.