ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಬ್ಬು ಅರೆಯುವ ಹಂಗಾಮು ಈ ತಿಂಗಳು ಆರಂಭ ಆಗಬೇಕು. ಮಂಡ್ಯ ಕಡೆ ಈಗಾಗಲೇ ಆರಂಭವಾಗಬೇಕಿತ್ತು. ಮತ್ತೆ ಅದೇ ದರ ನಿಗದಿ ವಿವಾದದಿಂದಾಗಿ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸುವುದನ್ನು ಮುಂದೆ ಹಾಕುತ್ತಲಿವೆ. ಪ್ರತಿವರ್ಷ ಹೀಗೇ ಆಗುತ್ತಿದೆ.
ಕಬ್ಬು ನುರಿಸುವ ಹಂಗಾಮು ಆರಂಭದ ಮುನ್ನ ಕಾರ್ಖಾನೆಗಳಿಗೂ, ರೈತ ಸಂಘಟನೆಗಳಿಗೂ ದರ ಕುರಿತು ವಿವಾದ ನಡೆದು ಕಬ್ಬು ಅರೆಯುವ ಕಾರ್ಯ ಒಂದು, ಒಂದೂವರೆ ತಿಂಗಳು ಮುಂದಕ್ಕೆ ಹೋಗುತ್ತಿದೆ. ಇದರಿಂದಾಗಿ ಕಾರ್ಖಾನೆಗಳು ಕಳೆದುಕೊಳ್ಳುವುದು ಅಷ್ಟಕ್ಕಷ್ಟೆ. ಆದರೆ ನೀರು, ವಿದ್ಯುತ್ ಅಭಾವದಿಂದ ಮೊದಲೇ ನಲುಗಿದ ಕಬ್ಬಿನ ಬೆಳೆ ಸಕಾಲಕ್ಕೆ ಕಟಾವಾಗಿ ಹೋಗದೆ, ಅವಧಿ ಮೀರಿ ಹೊಲದಲ್ಲಿ ನಿಂತು, ತೂಕ ಕಳೆದುಕೊಂಡು ರೈತನಿಗೆ ಆತಂಕ ಸೃಷ್ಟಿಸುತ್ತದೆ.
ನೆಲ ಖಾಲಿ ಆದರೆ ಸಾಕು ಎಂದು ಸತತವಾಗಿ ಕಾರ್ಖಾನೆಗಳಿಗೆ ಎಡತಾಕಿ ಕಬ್ಬು ಕಟಾವು ಆದೇಶ ಪಡೆಯುವ ರೈತ, ನಂತರ ಕಟಾವು ಸಾಗಾಣಿಕೆಗಾಗಿ ದುಪ್ಪಟ್ಟು ಹಣ ವೆಚ್ಚ ಮಾಡಬೇಕಾಗುತ್ತದೆ. ಆದ್ದರಿಂದ ಪ್ರತಿವರ್ಷ ನಿಶ್ಚಿತ ದಿನಾಂಕಗಳಂದು ಕಾರ್ಖಾನೆಗಳು ಕಬ್ಬು ಅರೆಯುವುದನ್ನು ಆರಂಭಿಸುವುದನ್ನು ಖಾತ್ರಿ ಪಡಿಸುವ ಕಾನೂನು ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು.