ಬೆಂಗಳೂರು: ‘ನಾನು ಈಗಾಗಲೇ ಕಾಂಗ್ರೆಸ್ನಿಂದ ಹೊರಗೆ ಬಂದಿದ್ದೇನೆ. ಆ ಪಕ್ಷದ ಜೊತೆ ನನಗೆ ಯಾವ ಸಂಬಂಧವೂ ಇಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಹೇಳಿದರು.
ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಸಿ.ನಾರಾಯಣಸ್ವಾಮಿ ಅವರು ಬುಧವಾರ ಸಂಜೆ ಯಲಹಂಕ ಸಮೀಪದ ಕೋಗಿಲು ಕ್ರಾಸ್ನಲ್ಲಿರುವ ಜಾಫರ್ ಷರೀಫ್ ಅವರ ತೋಟದ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಷರೀಫ್, ಕಾಂಗ್ರೆಸ್ ಪಕ್ಷದಿಂದ ಹೊರ ಬಂದಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದರು.
ಗೌಡರಿಗೆ ಮಾತ್ರ ಬೆಂಬಲ: ‘ಈ ಚುನಾವಣೆಯಲ್ಲಿ ನಾನು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿಲ್ಲ. ಆದರೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಮಾತ್ರ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬೆಂಬಲ ನೀಡಿದ್ದೇನೆ. ಗೌಡರು ಒಬ್ಬ ಹೋರಾಟದ ರಾಜಕಾರಣಿ. ಈ ಕಾರಣಕ್ಕಾಗಿ ಅವರನ್ನು ಬೆಂಬಲಿಸುತ್ತಿದ್ದೇನೆ’ ಎಂದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದಾಗಿಯೇ ನನಗೆ ಲೋಕಸಭಾ ಚುನಾವಣೆ ಟಿಕೆಟ್ ಕೈತಪ್ಪಿದೆ. ಇದಕ್ಕೆ ಬೇರೆ ಯಾರೂ ಕಾರಣರಲ್ಲ.
- ಜಾಫರ್ ಷರೀಫ್