ಬೆಂಗಳೂರು (ಪಿಟಿಐ): ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಮನಗರದ ಸಮೀಪ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ತಮ್ಮ ನಾಲ್ವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಗುರುವಾರ ಆರೋಪಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆಶಿ ಅವರ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ.
‘ಶಿವಕುಮಾರ್ ಬೆಂಬಲಿಗರಾದ ಸುಮಾರು 100 ಕಾಂಗ್ರೆಸ್ ಕಾರ್ಯಕರ್ತರು ರಾಮನಗರ ಸಮೀಪದ ಮಾಯಗಾನಹಳ್ಳಿಯಲ್ಲಿ ನಮ್ಮ ನಾಲ್ವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ರವಿಕೃಷ್ಣ ರೆಡ್ಡಿ ಆರೋಪಿಸಿದ್ದಾರೆ.
ಮತದಾರರಿಗೆ ಹಣ ಹಂಚುತ್ತಿದ್ದ ವೇಳೆ ಎಎಪಿ ಪ್ರಚಾರದ ಏಜೆಂಟ್ ಚಂದನ್ ಫೋಟೊ ತೆಗೆಯಲು ಯತ್ನಿಸಿದಾಗ ಅವರ ಮೇಲೆ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ‘ಪಕ್ಷದ ಇತರ ಮೂವರು ಸ್ವಯಂ ಸೇವಕರ ಮೇಲೂ ಅವರು ಹಲ್ಲೆ ನಡೆಸಿದ್ದು, ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದ್ದಾರೆ.