ಸಾಗರ: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾಗೋಡು ಸತ್ಯಾಗ್ರಹದ ರೂವಾರಿ ಎಚ್.ಗಣಪತಿಯಪ್ಪ (91) ಅವರು, ತಾಲ್ಲೂಕಿನ ವಡ್ನಾಲ ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ ತೀವ್ರ ಹೃದಯಘಾತದಿಂದ ನಿಧನರಾದರು.
ಮೃತರಿಗೆ ಪತ್ನಿ, ಐವರು ಪುತ್ರರು, ಐವರು ಪುತ್ರಿಯರು ಇದ್ದಾರೆ.
ಮೃತರ ಅಂತ್ಯಸಂಸ್ಕಾರ ಬುಧವಾರ ಬೆಳಿಗ್ಗೆ 10ಕ್ಕೆ ವಡ್ನಾಲ ಗ್ರಾಮದಲ್ಲಿ ನೆರವೇರಲಿದೆ. ಕಳೆದ ತಿಂಗಳು ಪಾರ್ಶ್ವವಾಯು ಪೀಡಿತರಾಗಿದ್ದ ಗಣಪತಿಯಪ್ಪ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ವಡ್ನಾಲ ಗ್ರಾಮದ ಮನೆಗೆ ಕರೆ ತರಲಾಗಿತ್ತು.
ಮಂಗಳವಾರ ಮಧ್ಯಾಹ್ನ 11.30ರ ವೇಳೆಗೆ ಉಸಿರಾಟದ ತೊಂದರೆಯಿಂದ ಅವರು ತೀವ್ರ ಬಳಲಿದ್ದರು. ಕುಟುಂಬ ವರ್ಗದವರು ತಕ್ಷಣ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರೂ ಫಲಕಾಣದೆ 11.55ರ ವೇಳೆಗೆ ಗಣಪತಿಯಪ್ಪ ಕೊನೆಯುಸಿರೆಳೆದರು.
ಗಣಪತಿಯಪ್ಪ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೊಸೂರು ಗ್ರಾಮದವರು.
ಗಣಪತಿಯಪ್ಪ ಅವರ ಜನಪರ ಹೋರಾಟವನ್ನು ಗುರುತಿಸಿ ರಾಜ್ಯ ಸರ್ಕಾರ 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2004ರಲ್ಲಿ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿದೆ. ಚಿತ್ರದುರ್ಗದ ಮುರುಘಾಮಠ ಗಣಪತಿಯಪ್ಪ ಅವರಿಗೆ ‘ಬಸವ ಶ್ರೀ ’ ಪ್ರಶಸ್ತಿ ಪ್ರದಾನ ಮಾಡಿತ್ತು.
ಬದುಕಿನ ಕೊನೆಯ ಘಟ್ಟದವರೆಗೂ ಗಣಪತಿಯಪ್ಪ ಅವರು ಸಾಮಾ ಜಿಕವಾಗಿ ಕ್ರಿಯಾಶೀಲರಾಗಿದ್ದು ಪ್ರಗತಿ ಪರ ಚಳವಳಿಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರು.