ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು–ಸುವ್ಯವಸ್ಥೆ ಕಾಪಾಡಲು ಮನವಿ

ಗೌರಿ– ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ
Last Updated 23 ಆಗಸ್ಟ್ 2014, 9:04 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಾಗರಿಕರು ಆ. 28 ಮತ್ತು 29ರಂದು ನಡೆಯಲಿರುವ ಗೌರಿ– ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಾನೂನು– ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.

ಗಣಪತಿ ಮೆರವಣಿಗೆ,  ಪ್ರತಿಷ್ಠಾಪನೆಯಿಂದ ವಿಸರ್ಜನೆಯಾಗುವವರೆಗೂ ಕಾನೂನು– ಸುವ್ಯವಸ್ಥೆ ಕಾಪಾಡುವುದು ಸಾರ್ವಜನಿಕರ ಜವಾಬ್ದಾರಿ ಎಂದು ಸೂಚಿಸಿದೆ.

ಗೌರಿ– ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಹಾಗೂ ಈ ಸಂಬಂಧ ಕಾರ್ಯಕ್ರಮ ನಡೆಸುವವರು ಸಂಬಂಧಪಟ್ಟ ಸರಹದ್ದಿನ ಪೊಲೀಸ್ ಠಾಣೆಯಲ್ಲಿ ಆ. 25ರೊಳಗೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು.

ಅರ್ಜಿ ಜತೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಖಾಸಗಿ ಸ್ಥಳವಾದರೆ ಆ ಸ್ಥಳದ ಮಾಲೀಕರಿಂದ ಅನುಮತಿ ಪತ್ರ ಪಡೆದು ಠಾಣೆಗೆ ಹಾಜರುಪಡಿಸಬೇಕು.

ಕಾರ್ಯಕ್ರಮಕ್ಕೆ ಧ್ವನಿವರ್ಧಕ ಉಪಯೋಗಿಸಲು ಅನುಮತಿ ಪತ್ರ, ಸೆಸ್ಕ್‌ನಿಂದ ನಿರಾಪೇಕ್ಷಣಾ ಪತ್ರ, ಅಗ್ನಿಶಾಮಕ ದಳದಿಂದ ನಿರಾಪೇಕ್ಷಣಾ ಪತ್ರ ಪಡೆದು ಲಗತ್ತಿಸಿ ಪೊಲೀಸ್ ನಿರೀಕ್ಷಕರಿಂದ ಅನುಮತಿ ಪಡೆಯುವುದು ಕಡ್ಡಾಯ.

ಧ್ವನಿವರ್ಧಕವನ್ನು ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಉಪಯೋಗಿಬಾರದು. ವ್ಯವಸ್ಥಾಪಕರು ಅಥವಾ ಕಾರ್ಯಕರ್ತರು ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುವಂತಿಲ್ಲ. ಲಾಟರಿ ಇತ್ಯಾದಿ ಯೋಜನೆ ಮೂಲಕ ಹಣ ಸಂಗ್ರಹಣೆ ಮಾಡಕೂಡದು. ಆ ರೀತಿ ಮಾಡುವುದು ಅಪರಾಧವಾಗಿದ್ದು, ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಆಯೋಜಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಪರಿಸರ ಸ್ನೇಹಿಯಾದ ಮಣ್ಣಿನಿಂದ ಮಾಡಿದ ಬಣ್ಣರಹಿತ  ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಗಣಪತಿಯ ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿ ಬಳಸಬೇಕು.

ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಪಾದಚಾರಿಗಳು ತಿರುಗಾಡುವ ಸ್ಥಳದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬಾರದು.
ಗಣಪತಿ ವಿಸರ್ಜಿಸುವಾಗ ಸಾಧ್ಯವಾದಷ್ಟು ಮನೆಯಲ್ಲಿಯೇ ಬಕೆಟ್‌ಗಳಲ್ಲಿ ನೀರು ತುಂಬಿಸಿ ಅದರಲ್ಲಿ ವಿಸರ್ಜಿಸಬೇಕು. ಬಳಿಕ ಗಿಡಗಳಿಗೆ ಆ ನೀರು ಹಾಕಬೇಕು. ಇಲ್ಲವೆ ಲಭ್ಯವಿರುವೆಡೆ ಸಂಚಾರಿ ವಿಸರ್ಜನಾ ವಾಹನ ಬಳಸಿ ಅಥವಾ ಕೆರೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕು. ವಿಸರ್ಜನೆಗೂ ಮೊದಲು ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು.

ಗಣಪತಿ ಮಂಡಳಿಗಳ ವ್ಯವಸ್ಥಾಪಕರು ಗಣಪತಿ ಇರುವ ಜಾಗದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಅವಕಾಶ ಇರುವಂತೆ ನಿರ್ಮಾಣ ಮಾಡಿರಬೇಕು. ಯಾವುದೇ, ಅಹಿತಕರ ಘಟನೆ ನಡೆಯದಂತೆ ಕಾರ್ಯಕ್ರಮ ನಡೆಸುವುದಾಗಿ ಹಾಗೂ ಇತರೇ ವಿಚಾರಗಳ ಬಗ್ಗೆ ಜವಾಬ್ದಾರಿ ಹೊರುವುದಾಗಿ ಮಂಡಳಿಯ ಪದಾಧಿಕಾರಿಗಳು, ಸ್ವಯಂ ಸೇವಕರ ಹೆಸರು ಹಾಗೂ ವಿಳಾಸವನ್ನು ಠಾಣಾಧಿಕಾರಿಗೆ ಸಲ್ಲಿಸಿ ಅನುಮತಿ ಪಡೆಯಬೇಕು.

ಮಂಡಳಿಗಳ ವ್ಯವಸ್ಥಾಪಕರು ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಸಮಯದಿಂದ ವಿಸರ್ಜನೆ ಮಾಡುವವರೆಗೂ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ನಿರಂತರವಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತೆವಹಿಸಬೇಕು. ಮಂಡಳಿಯ ಸ್ವಯಂಸೇವಕರ ಕಾವಲು ಏರ್ಪಡಿಸಿ ಕಾವಲುಗಾರರ ಹೆಸರು, ವಿಳಾಸವನ್ನು ಠಾಣೆಗೆ ಸಲ್ಲಿಸಬೇಕು. ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಒಂದು ರಿಜಿಸ್ಟರ್ ಇಟ್ಟು ದೈನಂದಿನ ಕಾವಲಿನ ವಿವರ ನಮೂದಿಸಬೇಕು.

ವ್ಯವಸ್ಥಾಪಕರು ಆಯಾ ದಿನದ ಕಾರ್ಯಕ್ರಮ ಮತ್ತು ವಿಸರ್ಜನೆ ಬಗ್ಗೆ ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಿಳಿಸಬೇಕು. ಮೆರವಣಿಗೆ ಮಾರ್ಗದ ಪೂರ್ವಾನುಮತಿ ಪಡೆದ ನಂತರ ಪೊಲೀಸ್ ಬಂದೋಬಸ್ತ್ ಪಡೆದುಕೊಳ್ಳಲು ಗಣಪತಿ ಮಂಡಳಿಗಳಿಗೆ ಸೂಚಿಸಲಾಗಿದೆ.
ವಿಸರ್ಜನಾ ಸ್ಥಳದಲ್ಲಿ ಮುನ್ನೆಚ್ಚರಿಕೆಯಿಂದ ಶಾಂತ ರೀತಿಯಲ್ಲಿ ವಿಗ್ರಹ ವಿಸರ್ಜನೆ ಮಾಡಬೇಕು.

ನಿಬಂಧನೆಗಳ ಉಲ್ಲಂಘನೆ ಸಾರ್ವಜನಿಕರ ಗಮನಕ್ಕೆ ಬಂದರೆ ಅಥವಾ ಶಾಂತಿಭಂಗ ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆ ಅಥವಾ ಈ ಕೆಳಕಂಡ ದೂರವಾಣಿಗೆ ಮಾಹಿತಿ ನೀಡಬಹುದು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೂ.ಸಂ. 08226- 222243 ಮೊ. 94808 04601. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೂ.ಸಂ. 08226-225979, ಮೊ. 94808 04602. ಡಿವೈಎಸ್‌ಪಿ ಚಾಮರಾಜನಗರ– ದೂ.ಸಂ. 08226--– -222090 ಮೊ. 94808 04620. ಡಿವೈಎಸ್‌ಪಿ ಕೊಳ್ಳೇಗಾಲ ದೂ.ಸಂ. 08224-252840, ಮೊ. 94808 04621. ಜಿಲ್ಲಾ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ) 08226– -222383

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT