ಬೆಂಗಳೂರು: ಕೆಪಿಎಸ್ಸಿಯ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಪಟ್ಟಿ ತಿರಸ್ಕರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ಕೊನೆಗೊಳಿಸಿದ್ದಾರೆ.
ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರವನ್ನು ಕೈಬಿಟ್ಟ ಅಭ್ಯರ್ಥಿಗಳು, ಬಹಿರಂಗ ಸಭೆ ನಡೆಸಿ 32 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ, ‘2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಪಟ್ಟಿ ತಿರಸ್ಕರಿಸಿರುವ ಸರ್ಕಾರದ ಕ್ರಮದಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ನ್ಯಾಯ ಸಿಗುವವರೆಗೂ ಅವರ ಜೊತೆಗಿರುತ್ತೇನೆ. ಒಂದು ವಾರದಲ್ಲಿ ಕಾನೂನು ರೀತಿಯ ಹೋರಾಟ ಆರಂಭಿಸಲಾಗುವುದು’ ಎಂದರು.
‘1998, 1999 ಹಾಗೂ 2004ರ ನೇಮಕಾತಿಯಲ್ಲಿ ಅನ್ಯಾಯಕ್ಕೊಳಗಾಗಿರುವ ಅಭ್ಯರ್ಥಿಗಳು ಸಂಪರ್ಕಿಸಿದರೆ ಅವರ ಪರವಾಗಿಯೂ ಹೋರಾಟ ನಡೆಸುತ್ತೇನೆ’ ಎಂದರು.
ಜೆಡಿಎಸ್, ಬಿಜೆಪಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬಹುಜನ ಸಮಾಜ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ವಿವಿಧ 16 ಸಂಘ ಟನೆಗಳ ಸಾವಿರಕ್ಕೂ ಹೆಚ್ಚು ಸದಸ್ಯರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.