ಯಲಹಂಕ: ಚಿಕ್ಕಜಾಲದಲ್ಲಿರುವ ಐಟಿಸಿ ಲಿಮಿಟೆಡ್ನ ಅನುದಾನದಲ್ಲಿ ಎನ್ಆರ್ಡಿಎಸ್ ಸಂಸ್ಥೆ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಗಳ ಹಸ್ತಾಂತರ ಸಮಾರಂಭ ಚಿಕ್ಕಜಾಲದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು.
ಶಾಲೆಯಲ್ಲಿ ಸೈಕಲ್ ನಿಲ್ದಾಣ, ವಿದ್ಯಾರ್ಥಿ ವಿಕಾಸ ವೇದಿಕೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಶೌಚಾಲಯ ದುರಸ್ತೀಕರಣ ಮತ್ತು ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿಸಿರುವ ಕಾಮಗಾರಿಯನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಸಮಾರಂಭವನ್ನು ಉದ್ಘಾಟಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಅಶೋಕನ್, ಐಟಿಸಿ ಲಿಮಿಟೆಡ್ ಸಂಸ್ಥೆಯವರು ಶಾಲೆಗೆ ವಿವಿಧ ಕಾಮಗಾರಿಗಳನ್ನು ನೀಡುವ ಮೂಲಕ ಶಿಕ್ಷಣದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಘ–ಸಂಸ್ಥೆಗಳ ಜತೆಗೆ ಕೈಜೋಡಿಸುವ ಮೂಲಕ ಪ್ರತಿ ಹಳ್ಳಿಗಳಿಗೂ ಇಂತಹ ಕಾರ್ಯಕ್ರಮವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಐಟಿಸಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ಮಲ್ ಘೋಷಾಲ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಗಮನ ನೀಡಿ, ಕುಂದು–ಕೊರತೆಗಳ ಬಗ್ಗೆ ವಿಶ್ಲೇಷಣೆಮಾಡಿ, ಸಂಸ್ಥೆಯ ವತಿಯಿಂದ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡುತ್ತಿದ್ದೇವೆ. ಮಕ್ಕಳು ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಒಳ್ಳೆಯ ವಿದ್ಯಾಂತರಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಐಟಿಸಿ ಲಿಮಿಟೆಡ್ ಹಾಗೂ ನಾರಾಯಣ ನೇತ್ರಾಲಯದ ಸಹಯೋಗದೊಂದಿಗೆ ಉಚಿತ ನೇತ್ರದಾನ ಶಿಬಿರವನ್ನು ಆಯೋಜಿಸಲಾಗಿತ್ತು.