ನಾನೊಬ್ಬ ಹಿರಿಯ ನಾಗರಿಕ. ಬೆಂಗಳೂರು ನಗರಿಯ ಹೃದಯಭಾಗದಂತಿರುವ ಇಂದಿರಾನಗರ ಡಬಲ್ ರೋಡ್ ನಿವಾಸಿ. ಕಳೆದ 25 ವರ್ಷದಲ್ಲಿ ಈ ಬಡಾವಣೆಯ ಪ್ರತಿಯೊಂದು ಪ್ರಗತಿಯನ್ನು ಕಣ್ಣಾರೆ ಕಂಡವ. ಆದರೆ, ವಿಷಾದದ ಸಂಗತಿಯೆಂದರೆ ಈ ಅಭಿವೃದ್ಧಿ ಇಲ್ಲಿನ ನಿವಾಸಿಗಳಿಗೆ ತೊಂದರೆ ಕೊಡುವ ರೀತಿಯಲ್ಲಿ ಬೆಳೆದದ್ದು.
ಈಚಿನ ಕೆಲವು ವರ್ಷಗಳಲ್ಲಿ ಇಂದಿರಾನಗರಕ್ಕೆ ಅನೇಕ ಕಾರ್ಪೊರೇಟ್ ಕಚೇರಿಗಳು, ತರಹೇವಾರಿ ರೆಸ್ಟೋರೆಂಟ್ಗಳು ಬಂದವು. ಇದರಿಂದಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಅಧಿಕವಾಯಿತು. ಕಚೇರಿ ಉದ್ಯೋಗಿಗಳು ಮತ್ತು ಹೋಟೆಲ್ಗೆ ಬರುವ ಗ್ರಾಹಕರು ತಮ್ಮ ಕಾರುಗಳನ್ನು ಫುಟ್ಪಾತ್ನಲ್ಲಿ ನಿಲ್ಲಿಸತೊಡಗಿದರು. ಅವರ ಈ ವರ್ತನೆ ಪಾದಚಾರಿಗಳಿಗೆ ತುಂಬ ತೊಂದರೆ ಒಡ್ಡುತ್ತಿದೆ.
ಈ ವಿಷಯ ಕುರಿತು ಬಿಬಿಎಂಪಿ ಗಮನಕ್ಕೆ ತಂದರೂ ಅದು ಜಾಣ ಮೌನ ಪ್ರದರ್ಶಿಸುತ್ತಿದೆ. ಸಂಚಾರ ಪೊಲೀಸರು ಈ ವಿಷಯದಲ್ಲಿ ನಿಷ್ಕ್ರಿಯರಾಗಿದ್ದಾರೆ. ಇನ್ನಾದರೂ ಫುಟ್ಪಾತ್ ಮೇಲೆ ವಾಹನ ನಿಲ್ಲಿಸುವುದನ್ನು ತಡೆಗಟ್ಟುವತ್ತ ಸಂಬಂಧಪಟ್ಟವರು ಗಮನ ಹರಿಸಲಿ.