ನವದೆಹಲಿ: ನೌಕರರ ಸಂಬಳ ಪಾವತಿ-ಸಲು ಪರದಾಡುತ್ತಿರುವ ಎಚ್ಎಂಟಿ ಕೈಗಡಿಯಾರ ಕಾರ್ಖಾನೆಯನ್ನು ಬಂದ್ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಒಂದು ಕಾಲಕ್ಕೆ ಹೆಮ್ಮೆಯ ಸಂಸ್ಥೆಯಾಗಿದ್ದ ಎಚ್ಎಂಟಿ 1961ರಲ್ಲಿ ಆರಂಭವಾಗಿದ್ದು, ಹದಿನಾಲ್ಕು ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ. 2011– 12ರಲ್ಲಿ 224 ಕೋಟಿ ನಷ್ಟಕ್ಕೆ ಒಳಗಾಗಿದ್ದ ಈ ಸಂಸ್ಥೆ 2012– 13ರಲ್ಲಿ 242 ಕೋಟಿ ನಷ್ಟ ಅನುಭವಿಸಿದೆ. ಸುಮಾರು 700 ಕೋಟಿ ವೇತನ ಮತ್ತಿತರ ಬಾಕಿ ಪಾವತಿಸಬೇಕಿದೆ.
ಕೇಂದ್ರ ಸರ್ಕಾರ ಎಚ್ಎಂಟಿಗೆ ಹಣಕಾಸು ಬೆಂಬಲ ಮತ್ತು ಸಾಲದ ನೆರವು ನೀಡುತ್ತಿದೆ. ಈಗಾಗಲೇ ಎಚ್ಎಂಟಿ ಗಡಿಯಾರ ಸಂಸ್ಥೆ ಮುಚ್ಚಲು ನಿಶ್ಚಯಿಸಿದ್ದು, ಸರ್ಕಾರಿ ಉದ್ಯಮಗಳ ಪುನರ್ರಚನಾ ಮಂಡಳಿ ಹಸಿರು ನಿಶಾನೆ ತೋರಿಸಿದೆ.
ಸಂಸ್ಥೆಯ ನಿರ್ದೇಶಕ ಮಂಡಳಿಯೂ ಇದಕ್ಕೆ ಒಪ್ಪಿಗೆ ನೀಡಿದೆ. ಈ ಸಂಸ್ಥೆಯನ್ನು ಮುಚ್ಚುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಮಾರ್ಚ್ ಅಂತ್ಯದವರೆಗೆ ಸಂಸ್ಥೆಯಲ್ಲಿ 1,100 ಉದ್ಯೋಗಿಗಳಿದ್ದರು. ಈಗಾಗಲೇ ಎಚ್ಎಂಟಿ ಬೆಂಗಳೂರು ಘಟಕದ ಜಮೀನು ಮಾರಲಾಗಿದೆ. ಈಚೆಗೆ ತುಮಕೂರು ಸಂಸದ ಮುದ್ದ ಹನುಮೇಗೌಡರು ಲೋಕಸಭೆಯಲ್ಲಿ ಎಚ್ಎಂಟಿ ಕುರಿತು ಪ್ರಸ್ತಾಪಿಸಿದ್ದರು.
ಬುಧವಾರ ಸಂಸತ್ತಿನ ಕೈಗಾರಿಕಾ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಈ ಸಭೆಯಲ್ಲೂ ಎಚ್ಎಂಟಿ ವಿಷಯ ಪ್ರಸ್ತಾಪವಾಯಿತು. ಎಚ್ಎಂಟಿ ತುಮಕೂರು ಘಟಕದ ಜಮೀನನ್ನು ಮಾರಾಟ ಮಾಡದೆ ಬೇರೆ ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕೆಂದು ತುಮಕೂರು ಲೋಕಸಭೆ ಸದಸ್ಯರು ಆಗ್ರಹಿಸಿದ್ದಾರೆ. ಈ ತಿಂಗಳ 22ರಂದು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತೆ ಸಭೆ ಸೇರಲಿದೆ.