ಮುಂಬೈ (ಪಿಟಿಐ): ಮೀಸೆ ಇನ್ನೂ ದಟ್ಟವಾಗಿ ಬೆಳೆಯದ 22ರ ಹುಡುಗಾಟಿಕೆ ವಯಸ್ಸಿನಲ್ಲಿ ನಾಗಪುರ ಪಾಲಿಕೆಯ ಅತ್ಯಂತ ಕಿರಿಯ ಸದಸ್ಯ. 27ರ ಕಿರಿಯ ವಯಸ್ಸಿನಲ್ಲಿ ಮೇಯರ್. 29ನೇ ವಯಸ್ಸಿಗೆ ಶಾಸಕ. 44ನೇ ವಯಸ್ಸಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ!
ಇದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ದೇವೇಂದ್ರ ಫಡ್ನವೀಸ್ ಅವರ ರಾಜಕೀಯ ಹಿನ್ನೆಲೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನಾಗಪುರ ಪಾಲಿಕೆಯ ಮೇಯರ್ ಹುದ್ದೆಯನ್ನು ಅಲಂಕರಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಫಡ್ನವೀಸ್ ಮಹಾರಾಷ್ಟ್ರದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೊಸ ದಾಖಲೆ ಕೂಡ ಅವರ ಪಾಲಾಗಲಿದೆ.
ನಾಗಪುರ ಪಾಲಿಕೆ ಸದಸ್ಯನಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಫಡ್ನವೀಸ್ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತ ಮೇಲೆ ಬಂದವರು. ಈವರೆಗೂ ಫಡ್ನವೀಸ್ ಯಾವುದೇ ಸಚಿವ ಸ್ಥಾನವನ್ನೂ ಅಲಂಕರಿಸಿರಲಿಲ್ಲ.
ಆರ್ಎಸ್ಎಸ್ ಕಟ್ಟಾ ಕಾರ್ಯಕರ್ತರಾಗಿರುವ ಅವರು ಮರಾಠರ ಪ್ರಾಬಲ್ಯವಿರುವ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದಿಂದ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಗೆ ಏರುತ್ತಿರುವ ಎರಡನೇ ವ್ಯಕ್ತಿ. ಇದಕ್ಕೂ ಮೊದಲು ಶಿವಸೇನಾದ ಮನೋಹರ ಜೋಶಿ ಮುಖ್ಯಮಂತ್ರಿಯಾಗಿದ್ದರು.
ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಬಿಜೆಪಿ ಸಾಧನೆಯನ್ನು ಮೋದಿ ಹಾಗೂ ಷಾ ಮೆಚ್ಚಿಕೊಂಡಿದ್ದರು. ಆ ಯಶಸ್ಸಿನ ಪಾಲು ಸಹಜವಾಗಿಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಫಡ್ನವೀಸ್ ಅವರಿಗೂ ದಕ್ಕಿತ್ತು.
ಫಡ್ನವೀಸ್ ಅವರಿಗೆ ರಾಜಕೀಯ ಹೊಸದಲ್ಲ. ಜನಸಂಘದಲ್ಲಿದ್ದ ಅವರ ತಂದೆ ದಿವಂಗತ ಗಂಗಾಧರ ಫಡ್ನವೀಸ್ ಅವರನ್ನು ನಿತಿನ್ ಗಡ್ಕರಿ ತಮ್ಮ ರಾಜಕೀಯ ಗುರು ಎಂದು ಕರೆಯುತ್ತಿದ್ದರು. ವಿದ್ಯಾರ್ಥಿ ದಿಸೆಯಲ್ಲಿಯೇ ಎಬಿವಿಪಿ ಸೇರಿದ್ದ ಅವರು 22ನೇ ವಯಸ್ಸಿನಲ್ಲಿಯೇ ನಾಗಪುರ ಪಾಲಿಕೆಯ ಸದಸ್ಯರಾಗಿ ಹಾಗೂ 1997ರಲ್ಲಿ 27ನೇ ವಯಸ್ಸಿನಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದರು. 1999ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಫಡ್ನವೀಸ್ ಮೊದಲ ಯತ್ನದಲ್ಲಿಯೇ ಯಶ ಕಂಡರು. ಅಲ್ಲಿಂದ ಒಮ್ಮೆಯೂ ಅವರು ಹಿಂದಿರುಗಿ ನೋಡಿಲ್ಲ. ಸತತ ನಾಲ್ಕು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ನಾಗಪುರ ನೈರುತ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಅವರು ವಿದರ್ಭ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟದ ಮುಂಚೂಣಿಯಲ್ಲಿದ್ದವರು. ಬಿಜೆಪಿ ಮಿತ್ರಪಕ್ಷವಾಗಿದ್ದ ಶಿವಸೇನಾ ಮಹಾರಾಷ್ಟ್ರ ವಿಭಜನೆಗೆ ಬದ್ಧ ವಿರೋಧಿಯಾಗಿದ್ದಾಗಲೂ ವಿದರ್ಭ ಪ್ರದೇಶದಿಂದ ಬಂದ ಫಡ್ನವೀಸ್ ಪ್ರತ್ಯೇಕ ವಿದರ್ಭ ರಾಜ್ಯದ ಬೇಡಿಕೆಗಾಗಿ ಪಟ್ಟು ಹಿಡಿದು ಹೋರಾಟ ನಡೆಸಿದ್ದರು.
ಬಿಜೆಪಿ ರಾಜ್ಯವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ ಎಂಬ ಶಿವಸೇನಾ ಆರೋಪದ ಕಾರಣ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಫಡ್ನವೀಸ್ ಎಲ್ಲಿಯೂ ವಿದರ್ಭ ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಸ್ತಾಪ ಮಾಡಿರಲಿಲ್ಲ. ಹಿಂದಿನ ಎನ್ಸಿಪಿ–ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದ ನೀರಾವರಿ ಹಗರಣವನ್ನು ಬೆಳಕಿಗೆ ತರುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.