ನವದೆಹಲಿ (ಪಿಟಿಐ): ಇನ್ನು ಮುಂದೆ ಕೇಂದ್ರ ಸರ್ಕಾರಿ ನೌಕರರ ಕಾರ್ಯಕ್ಷಮತೆ ಆಧಾರದಲ್ಲಿ ವಾರ್ಷಿಕ ವೇತನ ಬಡ್ತಿ ನಿರ್ಧಾರವಾಗಲಿದೆ.
ಬಡ್ತಿ ಮತ್ತು ವೇತನ ಬಡ್ತಿ ಮಾನದಂಡವನ್ನು ‘ಉತ್ತಮ’ ಕಾರ್ಯಕ್ಷಮತೆಯಿಂದ ‘ಅತ್ಯುತ್ತಮ’ ಕಾರ್ಯಕ್ಷಮತೆಗೆ ಪರಿಷ್ಕರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಏಳನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನ ಜಾರಿಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ವಿಷಯವನ್ನು ನಮೂದಿಸಲಾಗಿದೆ.
ಪರಿಷ್ಕೃತ ವೃತ್ತಿ ಪ್ರಗತಿ ಖಾತರಿ (ಎಂಎಸಿಪಿ) ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಿಂದಿನಂತೆ 10, 20 ಮತ್ತು 30 ವರ್ಷಗಳ ಸೇವೆಗೆ ಇದು ಅನ್ವಯವಾಗಲಿದೆ.
ಆದರೆ, ಸೇವೆಗೆ ಸೇರಿದ ಮೊದಲ 20 ವರ್ಷಗಳ ಒಳಗೆ ದೊರೆಯುವ ನಿಯಮಿತ ಬಡ್ತಿ ಅಥವಾ ಎಂಎಸಿಪಿ ಮಾನದಂಡಗಳನ್ನು ತಲುಪದ ಅದಕ್ಷ ನೌಕರರ ವಾರ್ಷಿಕ ಭತ್ಯೆಯನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಜಾರಿ
ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಪರಿಷ್ಕೃತ ವೇತನ ಜಾರಿಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದರಿಂದ ಸುಮಾರು ಒಂದು ಕೋಟಿ ನೌಕರರ ಮತ್ತು ಪಿಂಚಣಿದಾರರ ವೇತನ ಮತ್ತು ಪಿಂಚಣಿಯ ಮೂಲವೇತನ 2.57ಪಟ್ಟು ಹೆಚ್ಚಳವಾಗಲಿದೆ.
ವೇತನ ಆಯೋಗದ ಶಿಫಾರಸಿನಿಂದ ಸರ್ಕಾರದ ಬೊಕ್ಕಸಕ್ಕೆ ₹1.02 ಲಕ್ಷ ಕೋಟಿ ಹೊರೆಯಾಗಲಿದೆ.
2016ರ ಜನವರಿ 1ರಿಂದ ಪರಿಷ್ಕೃತ ವೇತನ ಅನ್ವಯವಾಗಲಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಕನಿಷ್ಠ ಆರಂಭಿಕ ವೇತನ ₹ 18 ಸಾವಿರ ನಿಗದಿಯಾಗಲಿದೆ.
ಸಂಪುಟ ಕಾರ್ಯದರ್ಶಿ ಮಟ್ಟದ ವರೆಗಿನ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ವೇತನ ₹90 ಸಾವಿರ ದಿಂದ ₹2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ನ್ಯಾಯಮೂರ್ತಿ ಎ.ಕೆ. ಮಾಥುರ್ ನೇತೃತ್ವದಲ್ಲಿ ರಚಿಸಲಾಗಿದ್ದ ಏಳನೇ ವೇತನ ಆಯೋಗ ಸಲ್ಲಿಸಿದ್ದ ಶಿಫಾರ ಸುಗಳನ್ನು ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಒಪ್ಪಿಕೊಂಡಿತ್ತು.
ಆದರೆ, ವಿವಿಧ ಭತ್ಯೆಗಳ ಕುರಿತು ಪರಿಶೀಲನೆ ನಡೆಸಲು ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಒಪ್ಪಿಸಲಾಗಿದೆ. ಈ ಸಮಿತಿ ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.