ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸ್ವತಂತ್ರವಾಗಿರಬೇಕು ಎಂಬುದು ಸಂವಿಧಾನದ ಮೂಲ ಆಶಯ. ಸಂವಿಧಾನದ ಬಲದಿಂದಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಕೊಲಿಜಿಯಂ ವ್ಯವಸ್ಥೆ ಜನ್ಮತಾಳಿತ್ತು. ಎರಡು ದಶಕಗಳ ಕಾಲ ದೇಶದ ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೆಲಸವನ್ನು ಅದು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಆದರೆ, ಕೆಲವು ವ್ಯಕ್ತಿಗಳಿಂದ ಆದ ತಪ್ಪನ್ನು ಕೊಲಿಜಿಯಂ ವ್ಯವಸ್ಥೆಯ ಹೆಗಲಿಗೆ ಕಟ್ಟಿ ಅದನ್ನು ಬದಿಗೆ ಸರಿಸುವ ಯತ್ನ ಆರಂಭವಾಯಿತು. ಈಗ ಕೊಲಿಜಿಯಂ ವ್ಯವಸ್ಥೆಯನ್ನು ನೇಪಥ್ಯಕ್ಕೆ ಸರಿಸುವ ಮಸೂದೆಗೆ ಸಂಸತ್ತಿನ ಒಪ್ಪಿಗೆಯ ಮುದ್ರೆ ಬಿದ್ದಿದೆ. ಹೊಸ ಕಾಯ್ದೆಯ ಅಡಿಯಲ್ಲಿ ನ್ಯಾಯಾಂಗ ನೇಮಕಾತಿ ಆಯೋಗ ಅಸ್ತಿತ್ವಕ್ಕೆ ಬರಲಿದೆ. ಅದರಲ್ಲಿ ಅರ್ಧದಷ್ಟು ಮಂದಿ ನ್ಯಾಯಾಂಗದ ಹೊರಗಿನವರು ಇರಲಿದ್ದಾರೆ. ನ್ಯಾಯಮೂರ್ತಿಗಳ ನೇಮಕಾತಿಯ ಅಧಿಕಾರವನ್ನು ಹೊರಗಿನವರ ಕೈಗಿಡುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯ ಹರಣಕ್ಕೆ ದಾರಿ ಮಾಡಿಕೊಡಲಾಗುತ್ತಿದೆ.
ಆರಂಭದ ಹಲವು ದಶಕಗಳ ಕಾಲ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವ ಆಯಾ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳಿಂದ ರವಾನೆ ಆಗುತ್ತಿತ್ತು. ಆಗ, ಮುಖ್ಯ ನ್ಯಾಯಮೂರ್ತಿ ಶಿಫಾರಸು ಮಾಡಿದ ಹೆಸರಿನ ಬಗ್ಗೆ ಕಾರ್ಯಾಂಗ ಪರಿಶೀಲನೆ ನಡೆಸುತ್ತಿತ್ತು. ಸಹಮತ ಇಲ್ಲದಿದ್ದರೆ ಅದನ್ನು ನಿರಾಕರಿಸುವ ಅಧಿಕಾರ ಕಾರ್ಯಾಂಗಕ್ಕೆ ಇತ್ತು.
ಮೊದಲು ಇದ್ದ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವಗಳ ಮೇಲಾಟಕ್ಕೆ ಅವಕಾಶ ಹೆಚ್ಚಾಗತೊಡಗಿತು. ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದ ಮೊದಲ ಪ್ರಕರಣ (ಎಸ್.ಪಿ.ಗುಪ್ತ ಪ್ರಕರಣ) ಸುಪ್ರೀಂಕೋರ್ಟ್ ಮುಂದೆ ಹೋದ ದಿನದಿಂದ ಹೊಸ ವ್ಯವಸ್ಥೆಯ ಅಗತ್ಯ ಕುರಿತ ಚರ್ಚೆ ಆರಂಭವಾಗಿತ್ತು. ಆಮೇಲೆ ಸುಪ್ರೀಂಕೋರ್ಟ್ ವಕೀಲರ ಸಂಘದ ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠ, ನ್ಯಾಯಾಂಗ ನೇಮಕಾತಿಯ
ಪ್ರಾಥಮಿಕ ಹಕ್ಕು ನ್ಯಾಯಾಂಗದ ಬಳಿಯೇ ಇರಬೇಕು ಎಂದು ಹೇಳಿತು. ಆ ತೀರ್ಪಿನ ಆಧಾರದಲ್ಲೇ ಕೊಲಿಜಿಯಂ ವ್ಯವಸ್ಥೆ ಬಂತು. ಕೊಲಿಜಿಯಂ ಶಿಫಾರಸು ಮೊದಲನೇ ಬಾರಿ ಹೋದಾಗ ಆ ಹೆಸರಿನ ವಿರುದ್ಧ ಮಾಹಿತಿ ಇದ್ದರೆ ಅದರೊಂದಿಗೆ ವಾಪಸು ಕಳುಹಿಸಬಹುದಿತ್ತು. ಅದನ್ನು ಪರಿಶೀಲಿಸಿ ಕೊಲಿಜಿಯಂ ಮತ್ತೆ ಅದೇ ಹೆಸರನ್ನು ಶಿಫಾರಸು ಮಾಡಿದರೆ ಒಪ್ಪಿಕೊಳ್ಳಲೇಬೇಕಿತ್ತು. ಬಳಿಕ ರಾಷ್ಟ್ರಪತಿಯವರು ನ್ಯಾಯಮೂರ್ತಿಗಳ ನೇಮಕಾತಿ ಆದೇಶ ಹೊರಡಿಸಬೇಕಿತ್ತು. ಸುಪ್ರೀಂಕೋರ್ಟ್ ಆದೇಶದಿಂದ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕಾರ್ಯಾಂಗದ ಮತ್ತು ರಾಜಕೀಯ ಪ್ರಭಾವ ತಪ್ಪಿ ಹೋಗಿತ್ತು. ಒಂಬತ್ತು ನ್ಯಾಯಮೂರ್ತಿಗಳ ತೀರ್ಪಿನ ನಂತರ ರಾಷ್ಟ್ರಪತಿಯವರ ಮಧ್ಯಪ್ರವೇಶದ ಮೂಲಕ ಅದರ ಜಾರಿ ತಡೆಯುವ ಪ್ರಯತ್ನವೂ ಆಗಿತ್ತು. ಆಗಲೂ ಕಾರ್ಯಾಂಗದ ಪರವಾದ ತೀರ್ಮಾನ ಬರಲಿಲ್ಲ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಐದು ಜನರ ಕೊಲಿಜಿಯಂ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಮೂರು ಜನರ ಕೊಲಿಜಿಯಂ ಇರುತ್ತದೆ. ಅಲ್ಲಿ ಒಬ್ಬರು ಹೇಳಿದ್ದನ್ನು ಎಲ್ಲರೂ ಸಾರಾಸಗಟಾಗಿ ಒಪ್ಪಿಕೊಳ್ಳುತ್ತಾರೆ ಎನ್ನಲು ಸಾಧ್ಯವಿಲ್ಲ. ಎರಡು ವರ್ಷಕ್ಕೂ ಹೆಚ್ಚು ಅವಧಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನನಗೆ ಈ ವಿಷಯದಲ್ಲಿ ನೇರ ಅನುಭವವಿದೆ. ನ್ಯಾಯಮೂರ್ತಿಗಳ ನೇಮಕಾತಿ ಪ್ರಸ್ತಾವ ಬಂದಾಗ ವಿಸ್ತೃತವಾಗಿ ಚರ್ಚೆ ಆಗುತ್ತದೆ. ಆಗ ನೇಮಕಾತಿಗೆ ಪರಿಗಣನೆಗೆ ಒಳಗಾಗುವ ವ್ಯಕ್ತಿಯ ಕುರಿತು ಎಲ್ಲರ ಬಳಿ ಇರುವ ಮಾಹಿತಿ ವಿನಿಮಯ ಆಗುತ್ತದೆ.
ಅಲ್ಲದೇ ಕೊಲಿಜಿಯಂ ಅಂದರೆ ಐದು ಜನ ಅಥವಾ ಮೂರು ಜನರ ತಂಡ ಮಾತ್ರವಲ್ಲ. ಇತರೆ ನ್ಯಾಯಮೂರ್ತಿಗಳಿಂದಲೂ ಮಾಹಿತಿ ಪಡೆಯಲು ಅವಕಾಶ ಇರುತ್ತದೆ. ನ್ಯಾಯಮೂರ್ತಿಗಳ ಹುದ್ದೆಗೆ ಪರಿಗಣಿಸುವವರು ಕಾನೂನಿನ ವಿಚಾರದಲ್ಲಿ ಹೊಂದಿರುವ ಅನುಭವ, ಜ್ಞಾನ, ಪರಿಣತಿ, ಅವರ ವೈಯಕ್ತಿಕ ವಿಚಾರಗಳ ಬಗ್ಗೆ ನ್ಯಾಯಾಂಗದಲ್ಲಿ ಇರುವವರಿಗೆ ಮಾತ್ರ ಮಾಹಿತಿ ಇರುತ್ತದೆ. ನ್ಯಾಯಾಂಗದ ಹೊರಗಿನವರಿಗೆ ಈ ವಿಷಯಗಳಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ.
ಹೊಸ ಕಾಯ್ದೆಯ ಅಡಿಯಲ್ಲಿ ನ್ಯಾಯಾಂಗ ನೇಮಕಾತಿ ಆಯೋಗ ಅಸ್ತಿತ್ವಕ್ಕೆ ಬರಲಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೇರಿ ಮೂವರು ನ್ಯಾಯಮೂರ್ತಿಗಳು, ಕಾನೂನು ಸಚಿವರು ಮತ್ತು ಇಬ್ಬರು ಗಣ್ಯ ವ್ಯಕ್ತಿಗಳು ಆಯೋಗದ ಸದಸ್ಯರಾಗಿರುತ್ತಾರೆ. ಗಣ್ಯ ವ್ಯಕ್ತಿಗಳು ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇರುವವರೇ ಆಗಿರಬೇಕಿಲ್ಲ. ಕಾನೂನು ಸಚಿವರು ಕೂಡ. ಅವರು ಹಿಂದೆ ವಕೀಲರಾಗಿರಬಹುದು. ಸಚಿವರಾಗುವ ಸಮಯಕ್ಕೆ ವಕೀಲಿ ವೃತ್ತಿ ಬಿಟ್ಟು ದೀರ್ಘ ಅವಧಿ ಆಗಿರುತ್ತದೆ. ನ್ಯಾಯಾಧೀಶರ ಬಗ್ಗೆ ಅವರಿಗೆ ಮಾಹಿತಿ ಇರಬಹುದು. ಆದರೆ ಅದು ಸ್ವಂತ ಮಾಹಿತಿ ಆಗಿರುವುದಿಲ್ಲ.
ಆಯೋಗದ ಸದಸ್ಯರಾಗುವ ಇಬ್ಬರು ಗಣ್ಯ ವ್ಯಕ್ತಿಗಳಿಗಂತೂ ನ್ಯಾಯಾಧೀಶರ ಬಗ್ಗೆ ಮಾಹಿತಿ ಇರುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಆ ರೀತಿಯ ಮಾಹಿತಿ ತಮಗೆ ಇದೆ ಎಂದು ಅವರು ಹೇಳುವುದೇ ಆದರೆ, ಅದು ಯಾವುದೋ ಪ್ರಭಾವದಿಂದ ಬಂದಿರುವುದಾಗಿರುತ್ತದೆ. ಇಲ್ಲವೇ ನ್ಯಾಯಾಧೀಶರ ಹುದ್ದೆಗೆ ಪರಿಗಣನೆ ಆಗುತ್ತಿರುವ ವ್ಯಕ್ತಿಗಳ ವಿರುದ್ಧವಾದ ಮೂಲದಿಂದ ಬಂದದ್ದಾಗಿರುತ್ತದೆ. ಕಾನೂನಿನ ಭಾಷೆಯಲ್ಲಿ ನಾವು ಇದನ್ನು 'Hearsay' ಎಂದು ಹೇಳುತ್ತೇವೆ. ಅದು ಯಾರೋ ಹೇಳಿದ್ದನ್ನು ಕೇಳಿಪಡೆದ ಮಾಹಿತಿಯೇ ಹೊರತು, ತಾವಾಗಿ ತಿಳಿದದ್ದಲ್ಲ. ಇದರಿಂದಾಗಿ ಅನ್ಯಾಯ ಆಗುವ ಸಂದರ್ಭವೇ ಹೆಚ್ಚು. ಹೊಸ ಕಾನೂನಿನ ಪ್ರಕಾರ ಆರು ಜನರ ಆಯೋಗದಲ್ಲಿ ಇಬ್ಬರು ಒಂದು ಹೆಸರಿಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ. ಈ ‘ವೀಟೊ’ ಅಧಿಕಾರ ನ್ಯಾಯಾಂಗದ ಪಾಲಿಗೆ ದೊಡ್ಡ ಅಪಾಯವಾಗಿ ಕಾಡಲಿದೆ.
ಸರ್ಕಾರವೊಂದು ಅಸ್ತಿತ್ವಕ್ಕೆ ಬರುವಾಗ ಪ್ರಧಾನಿ ಅಥವಾ ಮುಖ್ಯಮಂತ್ರಿ ತನ್ನ ಸಂಪುಟದ ಸದಸ್ಯರು ಯಾರು ಇರಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಪ್ರಾಮಾಣಿಕರು, ಜನರ ಸೇವೆ ಮಾಡುವ ಬದ್ಧತೆ ಇರುವವರೇ ಮಂತ್ರಿಗಳಾಗಬೇಕು ಎಂಬುದು ಜನರ ಆಶಯ. ಆದರೆ, ಅಲ್ಲಿ ಸಚಿವರ ಆಯ್ಕೆಗೆ ಯಾವ ಆಯೋಗವೂ ಇರುವುದಿಲ್ಲ. ಕಾರ್ಯಾಂಗದ ಸಿಬ್ಬಂದಿಯ ನೇಮಕಾತಿಯಲ್ಲೂ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಹೀಗಿರುವಾಗ ನ್ಯಾಯಾಂಗದ ನೇಮಕಾತಿಯಲ್ಲಿ ಏಕೆ ರಾಜಕೀಯ ಮತ್ತು ಕಾರ್ಯಾಂಗದ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಕು?
ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಒಂಬತ್ತು ನ್ಯಾಯಮೂರ್ತಿಗಳ ಪೀಠದ ತೀರ್ಪು ಬಂದಾಗಿನಿಂದಲೂ, ‘ನ್ಯಾಯಾಂಗದವರು ನಮ್ಮ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ’ ಎಂಬ ಭಾವನೆ ಕಾರ್ಯಾಂಗದಲ್ಲಿ ಬೇರೂರಿತ್ತು. ಅದನ್ನು ವಾಪಸು ಪಡೆಯಬೇಕೆಂಬ ಹವಣಿಕೆ ನಿರಂತರವಾಗಿ ಇತ್ತು. ಇತ್ತೀಚೆಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳ ಕೆಲವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ತಪ್ಪುಗಳಾಗಿವೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನ್ಯಾಯಾಧೀಶರ ನೇಮಕಾತಿಯಲ್ಲೂ ಹೊರಗಿನವರ ಪ್ರವೇಶಕ್ಕೆ ದಾರಿ ಮಾಡಿಕೊಡಲಾಗಿದೆ. ತಪ್ಪುಗಳಾಗಿರುವುದು ನಿಜ. ಇದು ಕೊಲಿಜಿಯಂ ಸದಸ್ಯರಾಗಿದ್ದವರು ಮಾಡಿದ ವೈಯಕ್ತಿಕ ತಪ್ಪೇ ಹೊರತು ಕೊಲಿಜಿಯಂ ವ್ಯವಸ್ಥೆಯ ತಪ್ಪಲ್ಲ. ಇಂತಹ ತಪ್ಪುಗಳು ಕೊಲಿಜಿಯಂಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬರುವ ನ್ಯಾಯಾಂಗ ನೇಮಕಾತಿ ಆಯೋಗದಲ್ಲೂ ಆಗುತ್ತವೆ. ಆದ್ದರಿಂದ ಒಳ್ಳೆಯ ವ್ಯಕ್ತಿಗಳನ್ನು ನೇಮಕ ಮಾಡಲು ಕೊಲಿಜಿಯಂ ವ್ಯವಸ್ಥೆ ಉಳಿಯುವುದು ಅಗತ್ಯವಿದೆ.
ಯಾವುದೋ ನೆಪ ಹೇಳಿಕೊಂಡು ನ್ಯಾಯಾಂಗದಲ್ಲಿ ಹೊರಗಿನವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ನ್ಯಾಯಮೂರ್ತಿಗಳು ಪೂರ್ವಗ್ರಹ ಪೀಡಿತರಾಗಿ ಇರುತ್ತಾರೆ ಎಂದು ನೀವು ಹೇಳುವುದಾದರೆ ಈ ನ್ಯಾಯಾಂಗ ನೇಮಕಾತಿ ಆಯೋಗದ ಸದಸ್ಯರಾಗುವ ಇತರರು ಅದಕ್ಕಿಂತಲೂ ಹೆಚ್ಚು ಪೂರ್ವಗ್ರಹ ಹೊಂದಿದವರಾಗಿರುತ್ತಾರೆ. ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಮಾಡಿ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಬೇಕೆಂಬ ಶಿಫಾರಸು ಮತ್ತು ಅದಕ್ಕೆ ಪೂರಕವಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಒಪ್ಪಿಗೆ ಪಡೆದಿರುವ ಬೆಳವಣಿಗೆಗಳಿಂದ ನ್ಯಾಯಾಂಗಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ಆಗದು. ದಾರಿಯಲ್ಲಿ ಹೋಗುವವರೆಲ್ಲರೂ ನ್ಯಾಯಾಂಗದ ಬಗ್ಗೆ ಮಾತನಾಡುವುದಕ್ಕೆ ಅವಕಾಶ ದೊರೆತಂತಾಗಿದೆ.
ನ್ಯೂನತೆಗಳಿವೆ, ಪರಿಹಾರವೂ ಇದೆ: ಈಗ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿರುವುದು ನಿಜ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ. ನ್ಯಾಯಾಂಗದ ಆಡಳಿತದಲ್ಲಿ ರಹಸ್ಯ ಕಾಯ್ದುಕೊಳ್ಳುವುದು ಹಿಂದಿನಿಂದಲೂ ನಡೆದುಬಂದಿದೆ. ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಹೊರತುಪಡಿಸಿ ಅಲ್ಲಿನ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ವಿಷಯವೂ ಹೊರಬರುವುದಿಲ್ಲ. ಇದನ್ನು ಕಿತ್ತು ಹಾಕಬೇಕು. ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಯ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. ನ್ಯಾಯಾಂಗದ ವೆಬ್ಸೈಟ್ಗಳು, ಸೂಚನಾ ಫಲಕಗಳಲ್ಲಿ ಅದನ್ನು ಪ್ರಕಟಿಸಬೇಕು. ನೇಮಕಾತಿಗೆ ಪರಿಗಣಿಸುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಬಳಿ ಮಾಹಿತಿ ಇದ್ದರೆ, ಅದನ್ನು ಸ್ವೀಕರಿಸಿ, ಪರಿಶೀಲಿಸಬೇಕು.
ಒಬ್ಬ ಅನರ್ಹ ಅಥವಾ ತಪ್ಪೆಸಗಿರುವ ನ್ಯಾಯಮೂರ್ತಿಯನ್ನು ಸುಲಭವಾಗಿ ವಜಾ ಮಾಡುವುದಕ್ಕೆ ನಮ್ಮ ಸಂವಿಧಾನದಲ್ಲಿ ಸಾಧ್ಯವಿಲ್ಲದಿರುವುದು ಎರಡನೇ ನ್ಯೂನತೆ. ಈ ಕಾರಣದಿಂದಾಗಿಯೇ ನ್ಯಾಯಾಂಗದ ಅತ್ಯುನ್ನತ ಹುದ್ದೆಗಳಿಗೆ ನೇಮಕ ಆಗುವವರೆಗೂ ಶುದ್ಧಹಸ್ತರಾಗಿದ್ದವರು ನಂತರ ದಾರಿ ತಪ್ಪುತ್ತಾರೆ. ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ಬಹುತೇಕರು ವಕಾಲತ್ತು ಮಾಡುತ್ತಿರುವಾಗ ಒಳ್ಳೆಯವರಾಗಿರುತ್ತಾರೆ. ನ್ಯಾಯಮೂರ್ತಿ ಹುದ್ದೆಯಿಂದ ತಮ್ಮನ್ನು ವಜಾ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಆಗ ಅಡ್ಡದಾರಿ ಹಿಡಿಯುತ್ತಾರೆ. ಇವತ್ತು ಬೆರಳು ತೋರಿಸುತ್ತಿರುವವರಲ್ಲಿ ಶೇಕಡ 75ರಷ್ಟು ಮಂದಿ ವಕೀಲರಾಗಿದ್ದ ಅವಧಿಯಲ್ಲಿ ಒಳ್ಳೆಯ ಹೆಸರು ಹೊಂದಿದವರಾಗಿದ್ದರು ಎಂಬುದು ಇದಕ್ಕೆ ನಿದರ್ಶನ.
ಈವರೆಗೆ ಹಲವು ನ್ಯಾಯಮೂರ್ತಿಗಳು ತಪ್ಪು ಮಾಡಿರುವುದು ನ್ಯಾಯಮೂರ್ತಿಗಳೇ ನಡೆಸಿದ ವಿಚಾರಣೆಯಲ್ಲೇ ಸಾಬೀತಾಗಿದ್ದರೂ ತಪ್ಪಿತಸ್ಥರನ್ನು ವಜಾ ಮಾಡಲು ಸಾಧ್ಯವೇ ಆಗಿಲ್ಲ. ಅವರನ್ನು ವಾಗ್ದಂಡನೆಗೆ ಗುರಿಮಾಡಲು ಆಗಿಲ್ಲ. ಕೆಲವರು ವಾಗ್ದಂಡನೆಗೆ ಶಿಫಾರಸು ಆದಾಗ ರಾಜೀನಾಮೆ ಕೊಟ್ಟು ಹೋದರು. ಅವರಿಗೆ ನಿವೃತ್ತಿ ನಂತರದ ಎಲ್ಲ ಸವಲತ್ತುಗಳು ದೊರೆಯುತ್ತಿವೆ. ಈ ವ್ಯವಸ್ಥೆ ಬದಲಾಗಬೇಕು. ನನ್ನ ಅಭಿಪ್ರಾಯದ ಪ್ರಕಾರ ನ್ಯಾಯಾಧೀಶರ ವಿರುದ್ಧದ ಆಪಾದನೆಗಳ ಕುರಿತು ತನಿಖೆ ನಡೆಸಲು ಆಯೋಗವೊಂದನ್ನು ರಚಿಸಬೇಕು. ಈ ಆಯೋಗದಲ್ಲಿ ನ್ಯಾಯಾಧೀಶರು ಇರಬೇಕೆಂದೇನಿಲ್ಲ. ಇದ್ದರೆ ಉತ್ತಮ. ನ್ಯಾಯಮೂರ್ತಿಗಳ ವಿರುದ್ಧ ಯಾವುದೇ ದೂರು ಬಂದರೂ ಆಯೋಗ ವಿಚಾರಣೆ ಮಾಡಬೇಕು. ಈ ಆಯೋಗ ಕಳುಹಿಸುವ ವರದಿಗಳನ್ನು ಒಪ್ಪಿಕೊಂಡು ರಾಷ್ಟ್ರಪತಿಗಳು ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ತಪ್ಪು ಸಾಬೀತಾದರೆ ವಜಾ ಮಾಡಲೇಬೇಕು. ವರ್ಗಾವಣೆಯಂಥ ಕಣ್ಣೊರೆಸುವ ಕ್ರಮಗಳಿಗೆ ಅವಕಾಶ ಇರಬಾರದು. ಕಾಲಮಿತಿಯೊಳಗೆ ನ್ಯಾಯಮೂರ್ತಿಗಳ ನೇಮಕಾತಿಗೂ ಕ್ರಮ ಕೈಗೊಳ್ಳಬೇಕು.
(ಲೇಖಕರು ರಾಜ್ಯ ನಿವೃತ್ತ ಲೋಕಾಯುಕ್ತರು ಹಾಗೂಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ)
ನಿರೂಪಣೆ: ವಿ.ಎಸ್.ಸುಬ್ರಹ್ಮಣ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.