ಚೆನ್ನೈ (ಪಿಟಿಐ): ಕರ್ನಾಟಕವು ಕಾವೇರಿ ನದಿಗೆ ಮೇಕೆದಾಟು ಬಳಿ ಚೆಕ್ಡ್ಯಾಂ ನಿರ್ಮಾಣ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ನಿರಾಶಕ್ತಿ ಹೊಂದಿದೆ ಎಂದು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಆರೋಪಿಸಿದ್ದಾರೆ.
ಅಂತರರಾಜ್ಯ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕವು ತಮಿಳುನಾಡು ಜನರ ಹಿತಾಶಕ್ತಿ ವಿರುದ್ಧ ನಡೆದುಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಆಪಾದಿಸಿದ್ದಾರೆ. ಈ ವಿಷಯದ ಬಗ್ಗೆ ನಿರಾಶಕ್ತಿ ಹೊಂದಿರುವ ಸರ್ಕಾರದ ಕ್ರಮವನ್ನೂ ಅವರು ಖಂಡಿಸಿದ್ದಾರೆ. ಮೇಕೆದಾಟು ಯೋಜನೆಯ ಬಗ್ಗೆ ವಿಶೇಷವಾಗಿ ಕಾವೇರಿ ನದಿ ಮುಖಜ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ನವದೆಹಲಿ ವರದಿ: ಕರ್ನಾಟಕ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಲಿರುವ 2ಅಣೆಕಟ್ಟೆಗಳು ಅಕ್ರಮವಾಗಿದ್ದು, ಕೇಂದ್ರ ಸರ್ಕಾರ ತಕ್ಷಣ ಅದಕ್ಕೆ ತಡೆ ಹಾಕಬೇಕು ಎಂದು ಡಿಎಂಕೆಯ ಸದಸ್ಯ ತಿರುಚಿ ಶಿವ ರಾಜ್ಯಸಭೆಯಲ್ಲಿ ಶುಕ್ರವಾರ ಆಗ್ರಹಿಸಿದರು.
ಕಾವೇರಿ, ಮುಲ್ಲಪರಿಯಾರ್ ಸರ್ವಪಕ್ಷ ಸಭೆಗೆ ಒತ್ತಾಯ: ಮುಲ್ಲಪೆರಿಯಾರ್ ಮತ್ತು ಕಾವೇರಿ ಸೇರಿದಂತೆ ಅಂತರರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಎಐಎಡಿಎಂಕೆ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಈ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಲು ಎಲ್ಲ ಪಕ್ಷಗಳ ಪ್ರತಿನಿಧಿಗಳ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಬೇಕು’ ಎಂದು ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಇ.ವಿ.ಕೆ.ಎಸ್ ಇಳಂಗೋವನ್ ಹೇಳಿದ್ದಾರೆ. ಎಲ್ಲರ ಕಳವಳಕ್ಕೆ ಕಾರಣವಾಗಿರುವ ವಿಷಯಗಳ ಬಗ್ಗೆ ರಾಜ್ಯ ಸರ್ಕಾರವು ಇತರ ಪಕ್ಷಗಳ ನಾಯಕರ ಅಭಿಪ್ರಾಯ ಕೆಳದಿರುವುದು ತಪ್ಪು ಎಂದು ಪಿಎಂಕೆ ನಾಯಕ ರಾಮದಾಸ್ ಟೀಕಿಸಿದ್ದಾರೆ.