ನವದೆಹಲಿ (ಪಿಟಿಐ): ಜಮ್ಮು– ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆಗಳಿಗೆ ನ. ೨೫ ರಿಂದ ಡಿ. ೨೦ರ ವರೆಗೆ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ. ೨೩ ರಂದು ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೆಹಲಿ ವಿಧಾನಸಭೆಯ ಮೂರು ಸ್ಥಾನಗಳಿಗೆ ನ. ೨೫ರಂದು ಉಪಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಕಾರಣ ಈ ಮೂರು ಕ್ಷೇತ್ರಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರವಾಹ ಪೀಡಿತ ಜಮ್ಮು–ಕಾಶ್ಮೀರದಲ್ಲಿ ಚುನಾವಣೆಯನ್ನು ಮುಂದೂಡಬೇಕು ಎಂದು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಒತ್ತಾಯವನ್ನು ಒಪ್ಪದ ಆಯುಕ್ತರು, ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪ ಚುನಾವಣೆ ಮೇಲೆ ‘ವಿಶೇಷ ಪರಿಣಾಮ’ ಬೀರುವುದಿಲ್ಲ ಎಂದರು.
ಪ್ರವಾಹದ ನಂತರದ ಪರಿಸ್ಥಿತಿ ಜತೆಗೆ ಹವಾಮಾನ, ಹಬ್ಬಗಳು ಮತ್ತು ಕಾನೂನು–ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ಜಮ್ಮು– ಕಾಶ್ಮೀರದಲ್ಲಿ ಒಂದು ರಾಜಕೀಯ ಪಕ್ಷವನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದಕ್ಕೆ ಸಮ್ಮತಿ ಸೂಚಿಸಿವೆ. ಸಕಾಲಕ್ಕೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿಯಾಗಿದೆ’ ಎಂದು ಸಂಪತ್ ವಿವರಿಸಿದರು. ಜಮ್ಮು–ಕಾಶ್ಮೀರದಲ್ಲಿ ಪ್ರಸಕ್ತ ವಿಧಾನಸಭೆ ಅವಧಿ ೨೦೧೫ರ ಜನವರಿ ೧೬ ಹಾಗೂ ಜಾರ್ಖಂಡ್ನಲ್ಲಿ ಜನವರಿ ೩ಕ್ಕೆ ಕೊನೆಗೊಳ್ಳುತ್ತದೆ.
ಸೂಕ್ಷ್ಮ ರಾಜ್ಯಗಳು: ‘ಭದ್ರತೆಯ ದೃಷ್ಟಿಯಿಂದ ಇವೆರಡೂ ಸೂಕ್ಷ್ಮ ರಾಜ್ಯಗಳು. ಈ ಸಂಬಂಧ ನಾವು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದಕ್ಕೆ ಅಗತ್ಯವಿರುವ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ’ ಎಂದು ಸಂಪತ್ ಹೇಳಿದರು.
ಮಾದರಿ ನೀತಿ ಸಂಹಿತೆ ಜಾರಿ: ತಕ್ಷಣದಿಂದಲೇ ಎರಡೂ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯಗಳಿಗೆ ಇದು ಅನ್ವಯವಾಗುತ್ತದೆ ಎಂದೂ ಅವರು ತಿಳಿಸಿದರು.