ನವದೆಹಲಿ (ಪಿಟಿಐ): ಚುನಾವಣೆ ವೇಳೆ ರಾಜಕೀಯ ಪಕ್ಷಗಳನ್ನು ನಿಯಂತ್ರಣದಲ್ಲಿರಿಸಲು ಕೇಂದ್ರ ಚುನಾವಣಾ ಆಯೋಗವು ‘ಕಾಸಿಗಾಗಿ ಸುದ್ದಿ’ಯನ್ನು ಚುನಾವಣಾ ಅಪರಾಧ ಎಂದು ಪರಿಗಣಿಸುವ ಪ್ರಸ್ತಾಪವನ್ನು ಕಾನೂನು ಸಚಿವಾಲಯದ ಮುಂದಿಟ್ಟಿದೆ.
ವಿವಿಧ ಮೂಲಗಳಿಂದ ಅಕ್ರಮವಾಗಿ ಹಣ ಬಳಕೆಯಾಗುವುದನ್ನು ತಪ್ಪಿಸಲು ಪಕ್ಷಗಳ ಪ್ರಚಾರ ವೆಚ್ಚಕ್್ಕೆ ಕಡಿವಾಣ ಹಾಕಲು ಸಹ ಅದು ಚಿಂತನೆ ನಡೆಸಿದೆ.
‘ಕಾಸಿಗಾಗಿ ಸುದ್ದಿಯನ್ನು ಚುನಾವಣಾ ಅಪರಾಧ ಎಂದು ಪರಿಗಣಿಸಿದರೆ ಕಾನೂನು ಉಲ್ಲಂಘಿಸುವವರನ್ನು ನಿಯಂತ್ರಿಸಲು ಸಾಧ್ಯ’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರು ಅಭಿಪ್ರಾಯಪಟ್ಟರು.
‘ಕಾಸಿಗಾಗಿ ಸುದ್ದಿಯು ಆಯೋಗಕ್ಕೆ ಗಂಭೀರ ಕಳವಳದ ಸಂಗತಿಯಾಗಿದೆ. ಈಗಿನ ಕಾನೂನಿನಂತೆ ಅದು ಚುನಾವಣಾ ಅಪರಾಧವಲ್ಲ. ಹೀಗಾಗಿ ‘ಕಾಸಿಗಾಗಿ ಸುದ್ದಿ’ಯನ್ನು ಚುನಾವಣಾ ಅಪರಾಧ ಎಂದು ಪರಿಗಣಿಸುವಂತೆ ಕಾನೂನು ಸಚಿವಾಲಯಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಕಾಸಿಗಾಗಿ ಸುದ್ದಿ’ಯನ್ನು ಚುನಾವಣಾ ಅಪರಾಧವನ್ನಾಗಿಸಿದರೆ ತಪ್ಪಿತಸ್ಥ ಅಭ್ಯರ್ಥಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯ’ ಎಂದರು.
‘ಆಯೋಗ ಎರಡು ವರ್ಷಗಳ ಹಿಂದೆಯೇ ಈ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿತ್ತು. ಈಗ ತೆಗೆದುಕೊಳ್ಳಲಾಗುತ್ತಿರುವ ಕ್ರಮಕ್ಕೆ ಕಾನೂನಿನ ಬೆಂಬಲವಿಲ್ಲ. ಒಂದು ವೇಳೆ ಕಾನೂನಿನ ಅನುಮೋದನೆ ಸಿಕ್ಕರೆ ಕಠಿಣ ಕ್ರಮ ತೆಗೆದುಕೊಳ್ಳಬಹುದು’ ಎಂದರು.
‘ಪಕ್ಷಗಳು ಮಾಡುವ ಚುನಾವಣಾ ವೆಚ್ಚಕ್ಕೆ ಮಿತಿ ಹೇರಿಲ್ಲ. ಆದರೆ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ನಿರ್ಬಂಧವಿದೆ. ರಾಜಕೀಯ ಪಕ್ಷಗಳು ಮಾಡುವ ವೆಚ್ಚಕ್ಕೂ ಮಿತಿ ಹೇರಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.