ಕಿಕ್ಕೇರಿ: ಮಂಗಳವಾರ ಸುರಿದ ರೇವತಿ ಮಳೆಗೆ ಹೋಬಳಿಯ ವಿವಿಧೆಡೆಯ ಗ್ರಾಮಗಳ ಮನೆ, ಜಮೀನುಗಳಿಗೆ ಹಾನಿಯಾಗಿದೆ.
ಪಟ್ಟಣ ಸೇರಿದಂತೆ ಕೋಟಹಳ್ಳಿ, ತುಳಸಿ, ಉದ್ದಿನಮಲ್ಲನ ಹೊಸೂರು, ತೆಂಗಿನಘಟ್ಟ, ಮರಿಯನಹೊಸೂರು, ದಬ್ಬೇಘಟ್ಟ ಗ್ರಾಮದ ವಿವಿಧೆಡೆ ಅಪಾರ ಪ್ರಮಾಣದ ಆಸ್ತಿ–ಪಾಸ್ತಿಗೆ ಹಾನಿಯಾಗಿದೆ.
ಬಿರುಗಾಳಿ ಮಳೆ ರಭಸಕ್ಕೆ ಕೋಟಹಳ್ಳಿ ಗ್ರಾಮದ ಬಹುತೇಕ ಮನೆಗಳ ಹೆಂಚುಗಳು ಹಾರಿ ಹೋಗಿ ರಸ್ತೆಯಲ್ಲಿ ಬಿದ್ದಿವೆ. ರೈತಾಪಿ ಜನರಿರುವ ಮನೆಗಳು ಇಡೀ ರಾತ್ರಿ ಜಲಾವೃತವಾಗಿದ್ದವು. ಮನೆಯಿಂದ ನೀರು ಹೊರಹಾಕಲು ಹರಸಾಹಸಪಟ್ಟರು. ಯಾವುದೇ ಸಾವು ನೋವು ಸಂಭವಿಸದಿದ್ದರೂ ಅಪಾರವಾದ ಆಸ್ತಿ, ಭೂಮಿಗೆ ನಷ್ಟವಾಗಿವೆ. ನಂಜೇಗೌಡರ ಜಮೀನಿನಲ್ಲಿದ್ದ ಬಾಳೆ, ತೆಂಗು, ಮೆಣಸು, ಅಡಿಕೆ ತೋಟ ನಾಶವಾಗಿವೆ. ವಯೋವೃದ್ಧೆ ಕಾಳಮ್ಮನವರ ಹಳೆಯ ಮನೆ ಭಾಗಶಃ ನಾಶವಾಗಿವೆ. ಬಹುತೇಕ ರೈತರ ಜಮೀನಿನಲ್ಲಿದ್ದ ಕಬ್ಬು, ತೇಗದ ಮರ, ಸಿಲ್ವರ್ ಮರಗಳು ಮುರಿದು ಬಿದ್ದಿವೆ.
ಪಟ್ಟಣದ ರಾಮಾಚಾರ್ ಪ್ಲೇನಿಂಗ್ ಮಿಷನ್ ಅಂಗಡಿಯ ತಗಡುಗಳು ಗಾಳಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಹೋಗಿವೆ. ಲಕ್ಷ್ಮೀಪುರದ ಬಳಿಯ ಬಾಲಾಜಿ ರೈಸ್ಮಿಲ್ ಬಳಿ ಹೆದ್ದಾರಿಗೆ ಮರ ಬಿದ್ದು ವಾಹನ ಓಡಾಟಕ್ಕೆ ಅಡಚಣೆಯಾಗಿದೆ. ಅಮಾನಿಕೆರೆ ಬಳಿಯ ಭದ್ರೇಗೌಡರ ಬಾಳೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಸಿಂಗಮ್ಮ ಗುಡಿಯ ಬಳಿಯ ಬೃಹತ್ ಆಲದ ಮರದ ರೆಂಬೆ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.