ವಿಜಯಪುರ: ಕಿವುಡರ ರಾಜ್ಯ ಮಟ್ಟದ ನಾಲ್ಕನೇ ಟೆನಿಸ್ಬಾಲ್ ಕ್ರಿಕೆಟ್ ಟೂರ್ನಿ ಇದೇ ನಗರದಲ್ಲಿ ಇದೇ 19ರಿಂದ ಮೂರು ದಿನ ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಇಲ್ಲಿ ಪ್ರಥಮ ಬಾರಿ ಈ ಟೂರ್ನಿ ನಡೆಯುತ್ತಿದೆ.
ನಾಕೌಟ್ ಮಾದರಿಯ ಟೂರ್ನಿಯ ಮೊದಲ ದಿನ ನಗರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ತಲಾ ನಾಲ್ಕು ಪಂದ್ಯಗಳು ಇರುತ್ತವೆ. ಬೆಳಿಗ್ಗೆ 9ಕ್ಕೆ ಪಂದ್ಯಗಳು ಆರಂಭವಾಗಲಿವೆ.
ಶನಿವಾರ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ.
ಗುರುವಾರ ಸಂಜೆಯೊಳಗೆ ಬೆಂಗಳೂರು, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲಾ ತಂಡಗಳು ನಗರಕ್ಕೆ ಬಂದಿವೆ ಎಂದು ಪಂದ್ಯಾವಳಿ ಆಯೋಜಿಸಿರುವ ರೋಟರಿ ಕ್ಲಬ್ ಆಫ್ ಬಿಜಾಪುರ ಹೆರಿಟೇಜ್ ಸಂಸ್ಥೆಯ ಪದಾಧಿಕಾರಿ ಸುರೇಶ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.
ಅಂತಿಮ ಸ್ಪರ್ಶ: ಕಿವುಡರ ಕ್ರಿಕೆಟ್ ಟೂರ್ನಿಗೆ ರೂಪಿಸಿರುವ ಪಿಚ್ಗೆ ಗುರುವಾರ ಮುಸ್ಸಂಜೆ ಅಂತಿಮ ಸ್ಪರ್ಶ ನೀಡಲಾಯಿತು. ಇದೇ ಸಂದರ್ಭ ಬೌಂಡರಿ ಗೆರೆಯನ್ನು ಗುರುತಿಸಲಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಪಿಚ್ ತಯಾರಿ ನಡೆದಿದ್ದು, ಗುರುವಾರ ಸಂಜೆ ಮತ್ತೊಮ್ಮೆ ನೀರು ಚಿಮುಕಿಸಿ ಪಿಚ್ ಮೇಲೆ ರೋಲ್ ಮಾಡಲಾಯಿತು. ಕ್ರೀಡಾಂಗಣದ ಮಾರ್ಕರ್ ಬಸವಂತ ಮೇಲಿನಮನಿ (ಭೀಮಶಿ) ತನ್ನ ಸಹವರ್ತಿಗಳ ಜತೆ ಕಾಮಗಾರಿಗಳನ್ನು ಚುರುಕಿನಿಂದ ನಿರ್ವಹಿಸಿ, ಟೂರ್ನಿಗೆ ಅಂತಿಮ ಸ್ವರೂಪ ನೀಡಿದರು.