ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಚೌತಿಯ ದಿನವಾದ ಮಂಗಳವಾರ ಮಡೆ ಮಡೆ ಸ್ನಾನ ಸೇವೆಯು ನಿರಾತಂಕವಾಗಿ ನೆರೆವೇರಿತು. ಇದರಲ್ಲಿ 229 ಭಕ್ತರು ಪಾಲ್ಗೊಂಡಿದ್ದರು.
ಮಧ್ಯಾಹ್ನ ಮಹಾಪೂಜೆ ನೆರೆವೇರಿದ ಬಳಿಕ ಹೊರಾಂಗ ಣದಲ್ಲಿ ಬ್ರಾಹ್ಮಣರಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಅನ್ನ ಪ್ರಸಾದ ಸ್ವೀಕರಿಸಿದ ಬಳಿಕ ಬ್ರಾಹ್ಮಣರು ಊಟ ಮಾಡಿದ ಎಂಜಲೆಲೆಯ ಮೇಲೆ, ಹರಕೆ ಹೇಳಿಕೊಂಡ ಭಕ್ತರು ಉರುಳು ಸೇವೆ ಮಾಡಿದರು. ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವರ್ಗಗಳ ಜನರು ಮಡೆ ಮಡೆ ಸ್ನಾನ ಉರುಳು ಸೇವೆಯಲ್ಲಿ ಪಾಲ್ಗೊಂಡರು.
ಮಡೆ ಮಡೆ ಸ್ನಾನಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಕ್ಷೇತ್ರ ಹಾಗೂ ಸೇವೆ ನಡೆಯುವಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರತಿಭಟನೆ: ಇದೇ ವೇಳೆ, ಮಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ‘ಮಡೆಸ್ನಾನ ಅಳಿಯಲಿ–ಮಾನವತೆ ಉಳಿಯಲಿ–ವೈಚಾರಿಕತೆ ಬೆಳೆಯಲಿ’ ಎಂಬ ಜನಜಾಗೃತಿ ಕಾರ್ಯಕ್ರಮ ಹಾಗೂ ಧರಣಿ ನಡೆಯಿತು.ಸಮಾಜದಲ್ಲಿದ್ದ ಹಲವಾರು ರೀತಿಯ ಮೌಢ್ಯ ಪದ್ಧತಿ ಗಳನ್ನು ನಿರ್ಮೂಲನೆ ಮಾಡಲಾಗಿದ್ದು, ಮಡೆ ಸ್ನಾನವನ್ನು ನಿಷೇಧಿಸುವಲ್ಲಿ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಮಡೆಸ್ನಾನದ ವಿರುದ್ಧ ಹೋರಾಟ ನಡೆಸಿದ್ದರು. ಇದೀಗ ಮುಖ್ಯಮಂತ್ರಿಯಾಗಿ ಎರಡು ವರ್ಷಗಳೇ ಕಳೆದರೂ ಮಡೆ ಸ್ನಾನಕ್ಕೆ ಮೂಲ ಕಾರಣವಾದ ಪಂಕ್ತಿಭೇದವನ್ನು ನಿಷೇಧಿಸಲು ಅವರು ಮುಂದಾಗಿಲ್ಲ ಎಂದು ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ದೂರಿದರು.
ವಿವಿಧ ಮಠಾಧೀಶರು ಹಾಗೂ ಪ್ರಗತಿಪರ ಚಿಂತಕರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.