ಬೆಂಗಳೂರು: ಒಳಗೆ ಕಾಲಿಡುತ್ತಿದ್ದಂತೆ ಲಾವಂಚದ ಘಮ. ಎಲ್ಲಿ ನೋಡಿದರಲ್ಲಿ ಶುದ್ಧ ದೇಸಿ ವಸ್ತುಗಳ ಸೊಬಗು. ಕರಕುಶಲಕರ್ಮಿಗಳ ಕೈಯಲ್ಲರಳಿದ ದೇಸಿ ಸೊಗಡಿನ ಉಡುಪುಗಳು. ಬಿದಿರಿನ ಹಸೆಕಲೆ ಚಿತ್ತಾರ, ಸಾವಯವ ಸಾಬೂನುಗಳು, ರಾಸಾಯನಿಕ ರಹಿತ ನೈಸರ್ಗಿಕ ಅಗರ ಬತ್ತಿಗಳು...
–‘ಗ್ರಾಮೀಣ ಅಂಗಡಿ’ ಒಳಗಿನ ದೃಶ್ಯಗಳಿವು. ಜಯನಗರ 4ನೇ ಟಿ ಹಂತದಲ್ಲಿರುವ ‘ಗ್ರಾಮೀಣ ಅಂಗಡಿ’ ಆಯೋಜಿಸಿರುವ ಗ್ರಾಮೀಣ ಕರಕುಶಲಕರ್ಮಿಗಳ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹಾಗೂ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್ ಚಾಲನೆ ನೀಡಿದರು.
ವರಮಹಾಲಕ್ಷ್ಮೀ–ಗೌರಿ ಹಬ್ಬದ ಸಡಗರ ಹಾಗೂ ಸ್ವಾತಂತ್ರ್ಯೋತ್ಸವ ಮಾಸಾಚರಣೆ ಅಂಗವಾಗಿ ಇಲ್ಲಿ ಕೈಮಗ್ಗ, ಖಾದಿ ಹಾಗೂ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ 31ರವರೆಗೆ ನಡೆಯಲಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಎಚ್.ಎಸ್. ದೊರೆಸ್ವಾಮಿ, ‘ರಾಜ್ಯದ ಕೆಲವೆಡೆ ಬಡತನ ತಾಂಡವ ವಾಡುತ್ತಿದೆ. ಆದರೆ, ಮಂತ್ರಿಗಳು, ಶಾಸಕರು ಅಧಿವೇಶನದಲ್ಲಿ ಒಂದು ದಿನವೂ ಬಡತನದ ವಿಷಯದ ಬಗ್ಗೆ ಚರ್ಚಿಸಲಿಲ್ಲ. ಅದಕ್ಕೆ ಬದಲಾಗಿ ಭೂ ಕಬಳಿಕೆ, ತಲೆದಂಡದ ವಿಷಯಗಳ ಬಗ್ಗೆಯೇ ಕಿತ್ತಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.
ಲಕ್ಷ್ಮೀ ಚಂದ್ರಶೇಖರ್ ಮಾತನಾಡಿ, ‘ಗ್ರಾಮೀಣ ಹೆಣ್ಣು ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಇಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದರು.