ನವದೆಹಲಿ (ಪಿಟಿಐ): ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಶಿಕ್ಷೆಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್ ಬುಧವಾರ ಕಾಯ್ದಿರಿಸಿದೆ.
ಈ ಪ್ರಕರಣದಲ್ಲಿ ಸಲ್ಮಾನ್ ಅವರಿಗೆ ವಿಚಾರಣಾ ನ್ಯಾಯಾಲಯ 2006ರಲ್ಲಿ ವಿಧಿಸಿದ್ದ ಐದು ವರ್ಷ ಜೈಲು ಶಿಕ್ಷೆಗೆ ರಾಜಸ್ತಾನ ಹೈಕೋರ್ಟ್ ಕಳೆದ ವರ್ಷ ನವೆಂಬರ್ 12ರಂದು ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಅಲ್ಲಿನ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜೆ.ಮುಖ್ಯೋಪಾಧ್ಯಾಯ ಅವರಿದ್ದ ಪೀಠವು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸದೇ ಸಲ್ಮಾನ್ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿರುವ ಕಾರಣವನ್ನು ಪ್ರಶ್ನಿಸಿತು.
‘ವೃತ್ತಿಪರ ಉದ್ದೇಶಕ್ಕಾಗಿ ಬ್ರಿಟನ್ಗೆ ತೆರಳಲು ಖಾನ್್ ಅವರು ವೀಸಾ ಪಡೆಯುವುದಕ್ಕೋಸ್ಕರ ಅವರ ಶಿಕ್ಷೆಗೆ ತಡೆ ನೀಡಿದ್ದು ನ್ಯಾಯ ಸಮ್ಮತವಲ್ಲ. ಎಲ್ಲ ಕಡೆ ಇದೇ ನಿಯಮ ಪಾಲಿಸಿದಲ್ಲಿ ಅಪರಾಧಿಯು ತನ್ನ ಶಿಕ್ಷೆಗೆ ಕೋರ್ಟ್ ತಡೆ ನೀಡಿದ ಬಳಿಕ ಉದ್ಯೋಗಕ್ಕೆ ಅರ್ಜಿ ಹಾಕಬಹುದಲ್ಲವೇ’ ಎಂದೂ ಪೀಠ ಕೇಳಿತು.
ವಕೀಲರ ವಾದ...
‘ಶಿಕ್ಷೆಗೆ ತಡೆ ನೀಡದಿದ್ದಲ್ಲಿ ಸಲ್ಮಾನ್ ಖಾನ್ ಅವರಿಗೆ ತೊಂದರೆಯಾಗುತ್ತದೆ ಮತ್ತು ವಿದೇಶ ಪ್ರವಾಸ ಕೈಗೊಳ್ಳುವ ಅವರ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದು ಖಾನ್ ಪರ ವಕೀಲ ಸಿದ್ದಾರ್ಥ್ ಲುಥ್ರಾ ವಾದಿಸಿದರು.