ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್)ದಿಂದ ಕೆಮಿಕಲ್ ಮಿಶ್ರಿತ ನೀರನ್ನು ಕೃಷ್ಣಾ ನದಿಗೆ ಹರಿದು ಬಿಡುತ್ತಿರುವುದರಿಂದ ಅಪಾಯ ಎದುರಾಗಿದೆ.
ಆರ್ಟಿಪಿಎಸ್ನ ಕಾಂಪೌಂಡ್ ನಲ್ಲಿರುವ ರಂಧ್ರದ ಮೂಲಕ ಹೊರ ಬರುವ ಈ ನೀರು ಚರಂಡಿಯಿಂದ ಕೃಷ್ಣಾ ನದಿಗೆ ಸೇರ್ಪಡೆಯಾಗುತ್ತಿದೆ. ನದಿ ನೀರನ್ನು ಕುಡಿಯಲು ಬಳಕೆ ಮಾಡು ತ್ತಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಜಲಚರಗಳ ಜೀವಕ್ಕೂ ಕಂಟಕ ಎದುರಾಗುವ ಆತಂಕವು ಜನರಲ್ಲಿ ಹೆಚ್ಚಿದೆ.
ಕೆಮಿಕಲ್ ಮಿಶ್ರಿತ ನೀರು ನದಿಗೆ ಸೇರುವುದರಿಂದ ಈ ನೀರು ಕುಡಿವ ಜನರು ಅನಾರೋಗ್ಯಕ್ಕೆ ತುತ್ತಾಗುವಂತ ಸ್ಥಿತಿ ಇದೆ. ನದಿಗೆ ನೀರನ್ನು ಹರಿದು ಬಿಡು ತ್ತಿರುವುದರಿಂದ ನೀರು ಹಾಳಾಗುತ್ತಿದೆ. ಆರ್ಟಿಪಿಎಸ್ನ ಈ ಧೋರಣೆ ಖಂಡಿಸಿ ಪರಿಸರ ಅಧಿಕಾರಿಗಳಿಗೆ ದೂರು ನೀಡ ಲಾಗುತ್ತದೆ ಎಂದು ದೇವಸೂಗೂರು ನಿವಾಸಿಗಳಾದ ಸುರೇಶ ಮಡಿವಾಳ, ಸಿದ್ದರಾಮಪ್ಪ ವಗ್ಗಯ್ಯ, ಸೂಗಪ್ಪ, ವಸಂತ ತಿಳಿಸಿದರು.
ಕಲ್ಲಿದ್ದಲು ಕಡಿಮೆಯಾದಾಗ ಆಯಿಲ್ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆಯಿಲ್ ಉರಿದ ನಂತರ ಸಂಗ್ರಹವಾಗುವ ಈ ಕೆಮಿಕಲ್ ಮಿಶ್ರಿತ ನೀರು ನದಿಗೆ ಸೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಮಿಕಲ್ ಮಿಶ್ರಿತ ನೀರು ನದಿಗೆ ಬಿಡುವುದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಆರ್ಟಿಪಿ ಎಸ್ ಮುಖ್ಯ ಕಾರ್ಯನಿರ್ವಾ ಹಕಾಧಿಕಾರಿ ಸಿ.ವೇಣುಗೋಪಾಲ ತಿಳಿಸಿದರು.