ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ವಿರುದ್ಧ ದೂರು, ಚುನಾವಣೆ ಪ್ರಕ್ರಿಯೆ ಮೇಲೆ ಕರಿನೆರಳು

Last Updated 22 ಜುಲೈ 2016, 8:07 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ ಆಡಳಿತದ ಸುಧಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳನ್ನು  ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿರುವ ಕಾರಣ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣಾ ಪ್ರಕ್ರಿಯೆಗಳ ಮೇಲೆ ಕರಿನೆರಳು ಬಿದ್ದಂತಾಗಿದೆ.

70 ವರ್ಷ ಮೇಲ್ಟಟ್ಟವರು ಕ್ರಿಕೆಟ್‌ ಆಡಳಿತದಲ್ಲಿ ಇರುವಂತಿಲ್ಲ. ಅಧಿಕಾರದಲ್ಲಿದ್ದರು ಮೂರು ವರ್ಷಗಳವರೆಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ಶಿಫಾರಸುಗಳನ್ನು ಲೋಧಾ ಸಮಿತಿ ಮಾಡಿದೆ. ಆದ್ದರಿಂದ ಆಗಸ್ಟ್‌ ಏಳರಂದು ನಿಗದಿಯಾಗಿರುವ ಕೆಎಸ್‌ಸಿಎ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ನಡೆಯುವುದು ಈಗ ತೂಗುಯ್ಯಾಲೆಯಲ್ಲಿದೆ.

ದೂರು:  ಲೋಧಾ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಿಸಿ ಕೆಎಸ್‌ಸಿಎ ಚುನಾವಣೆ ನಡೆಸಲು ಮುಂದಾಗಿದೆ ಎಂದು ರಾಜ್ಯ ತಂಡದ ಮಾಜಿ ಆಟಗಾರ  ಸಿ.ಆರ್‌. ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಶಿಫಾರಸು ಅನುಷ್ಠಾನ ಸಮಿತಿಗೆ  ದೂರು ನೀಡಿದ್ದಾರೆ. ಆದ್ದರಿಂದ  ಸಮಿತಿಯು ಕೆಎಸ್‌ಸಿಎಗೆ ಪತ್ರ ಬರೆದಿದ್ದು ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಇದರ ಬಗ್ಗೆ ಪತ್ರಿಕೆ ಜೊತೆ ಮಾತನಾಡಿದ ಲಕ್ಷ್ಮೀನಾರಾಯಣ ಅವರು ‘ಸುಪ್ರೀಂ ಕೋರ್ಟ್‌ ಸೂಚನೆ ಉಲ್ಲಂಘಿಸಿ ಕೆಎಸ್‌ಸಿಎ ಚುನಾವಣೆಗೆ ಮುಂದಾಗಿದೆ. ಎಲ್ಲಾ ರಾಜ್ಯ ಸಂಸ್ಥೆಗಳಿಗೂ ಒಂದೇ ನಿಯಮ ಅನ್ವಯವಾಗುವುದಾದರೆ ಕರ್ನಾಟಕ ಕ್ರಿಕೆಟ್‌ ಸಂಸ್ಥೆಗೆ ಏಕೆ ಪ್ರತ್ಯೇಕ ನಿಯಮ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದು ನಿಜ’ ಎಂದು ಅವರು ಖಚಿತಪಡಿಸಿದ್ದಾರೆ.

ಕೆಎಸ್‌ಸಿಎ ಹಾಲಿ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್ ಅವರು 2013ರ ಚುನಾವಣೆಯಲ್ಲಿ ಗೆಲುವು ಪಡೆದಿದ್ದರು.   ಅವರು ಮತ್ತೊಂದು ಅವಧಿಗೆ ಸ್ಪರ್ಧಿಸುತ್ತೇನೆ ಎಂದು ಈಗಾಗಲೇ ಹೇಳಿದ್ದಾರೆ.
ಶ್ರೀಕಂಠದತ್ತ ನರಸಿಂಹರಾಜ್‌ ಒಡೆಯರ್ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅಶೋಕ್‌ ಆನಂದ್ ಅವರು ನೇಮಕವಾಗಿದ್ದರು. ಅಶೋಕ್‌ ಅವರಿಗೆ ಈಗ 75 ವರ್ಷ ವಯಸ್ಸು.

ಲೋಧಾ ಸಮಿತಿ ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸಿತ್ತು. ಇದರ ಬಗ್ಗೆ ಆರು ತಿಂಗಳು ನಿರಂತರ ವಿಚಾರಣೆ ನಡೆಸಿದ್ದ ಕೋರ್ಟ್‌ ಅಂತಿಮವಾಗಿ ಸೋಮವಾರ ಲೋಧಾ ಶಿಫಾರಸುಗಳನ್ನು ಒಪ್ಪಿಕೊಂಡಿತ್ತು. ಒಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯಿಂದ ಒಬ್ಬರಿಗಷ್ಟೇ ಮತದಾನದ ಹಕ್ಕು ಇರಬೇಕು ಎಂದು ಸಮಿತಿ ಮಾಡಿದ್ದ ಶಿಫಾರಸಿಗೂ ಸುಪ್ರೀಂ ಕೋರ್ಟ್‌ ಅಸ್ತು ಎಂದಿದೆ.

ನಿಯಮ ಉಲ್ಲಂಘಿಸಿಲ್ಲ: ವಿನಯ್‌  ಮೃತ್ಯುಂಜಯ್

‘ಸುಪ್ರೀಂ ಕೋರ್ಟ್‌ ನೀಡಿರುವ ಯಾವುದೇ ಸೂಚನೆಯನ್ನು ನಾವು ಉಲ್ಲಂಘಿಸಿಲ್ಲ. ಲೋಧಾ ಸಮಿತಿ ಶಿಫಾರಸುಗಳ ಪ್ರಕಾರವೇ ಚುನಾವಣೆ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತುಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಲೋಧಾ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದ್ದು ಜುಲೈ 18ರಂದು. ಇದಕ್ಕೂ ಐದು ದಿನ ಮೊದಲೇ ನಾವು ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದೆವು. ಒಂದು ವೇಳೆ ಸುಪ್ರೀಂ ಕೋರ್ಟ್‌ ಸೂಚನೆ ಪ್ರಕಟವಾದ ಬಳಿಕ  ಚುನಾವಣೆ ಘೋಷಣೆ ಮಾಡಿದ್ದರೆ ಅದು  ಶಿಫಾರಸು ಉಲ್ಲಂಘನೆ ಮಾಡಿದಂತೆ ಆಗುತ್ತಿತ್ತು. ನಮ್ಮ ವಿರುದ್ಧ ದೂರು ನೀಡಿದವರು ಈ ಅಂಶವನ್ನೇ  ತಮ್ಮ ದೂರಿನಲ್ಲಿ ದಾಖಲಿಸಿಲ್ಲ.  ಆದ್ದರಿಂದ ನಮಗೆ ಯಾವ ಆತಂಕವೂ ಇಲ್ಲ’ ಎಂದೂ ಅವರು ಹೇಳಿದರು.

‘ಲೋಧಾ ಶಿಫಾರಸು ಅನುಷ್ಠಾನ ಸಮಿತಿಗೆ  ನಮ್ಮ ವಿರುದ್ಧ ಯಾರೊ ದೂರು ನೀಡಿದ್ದಾರೆ. ಆದ್ದರಿಂದ ಸಮಿತಿ ನಮ್ಮಿಂದ ಸ್ಪಷ್ಟನೆ ಕೇಳಿದೆ ಅಷ್ಟೇ. ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಳ್ಳುವ ಮೊದಲೇ ಚುನಾವಣೆ ಘೋಷಣೆ ಮಾಡಿದ್ದ ವಿವರಗಳನ್ನು ಗುರುವಾರ ಸಮಿತಿಗೆ ಕಳುಹಿಸುತ್ತೇವೆ. ಸಮಿತಿಯಿಂದ  ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದೂ ಅವರು ವಿವರಣೆ ನೀಡಿದ್ದಾರೆ.


ಪ್ರಕ್ರಿಯೆ ನಿಲ್ಲಿಸಲು ಸೂಚನೆ

ನವದೆಹಲಿ (ಪಿಟಿಐ): ಲೋಧಾ ಶಿಫಾರಸುಗಳ ಅನುಷ್ಠಾನ ಸಮಿತಿ ಬುಧವಾರ ಕರ್ನಾಟಕ ಮತ್ತು ಬಂಗಾಳ ಕ್ರಿಕೆಟ್‌ ಸಂಸ್ಥೆಗಳಿಗೆ ಸೂಚನೆ ನೀಡಿದ್ದು ಚುನಾವಣಾ ಪ್ರಕ್ರಿಯೆಗಳನ್ನು ನಿಲ್ಲಿಸುವಂತೆ ತಾಕೀತು ಮಾಡಿದೆ.  ಇದೇ ತಿಂಗಳ 31 ರಂದು ಬಂಗಾಳ ಸಂಸ್ಥೆಯ ಚುನಾವಣೆ ನಿಗದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಸಂಸ್ಥೆಗೆ ಮಂಗಳವಾರ ಚುನಾವಣೆ ನಡೆದಿತ್ತು. ಅಲ್ಲಿನ ಕ್ರೀಡಾ ಸಚಿವ ಇಮ್ರಾನ್ ರಾಜಾ ಅನ್ಸಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದನ್ನೂ ಲೋಧಾ ಅನುಷ್ಠಾನ ಸಮಿತಿ ಸಿಂಧುವಲ್ಲ ಎಂದು ಹೇಳಿದೆ.

***

ಲೋಧಾ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಳ್ಳುವ ಮೊದಲೇ ಚುನಾವಣೆ  ಘೋಷಣೆ ಮಾಡಿದ್ದೇವೆ. ನಾವು ನಿಯಮ ಉಲ್ಲಂಘಿಸಿಲ್ಲ.
-ವಿನಯ್‌ ಮೃತ್ಯುಂಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT