ನವದೆಹಲಿ (ಪಿಟಿಐ) : ಮತದಾನದ ಮುನ್ನಾ ದಿನವಾದ ಬುಧವಾರ ಅಚ್ಚರಿಯ ಬೆಳವಣಿಗೆ ಒಂದರಲ್ಲಿ, ಆಮ್ ಆದ್ಮಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಮಗೆ ಕಪಾಳಮೋಕ್ಷ ಮಾಡಿದ ಆಟೋಚಾಲಕ ಲಲಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಆತನನ್ನು ಕ್ಷಮಿಸಿರುವುದಾಗಿ ತಿಳಿಸಿದ್ದಾರೆ.
ಕೇಜ್ರಿವಾಲ್ ಜತೆಗಿನ ಭೇಟಿ ಬಳಿಕ ಮಾತನಾಡಿದ ಲಲಿ, ‘ನಾನು ತಪ್ಪು ಮಾಡಿದ್ದೇನೆ ನಿಜ. ಆದರೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ರಾಜೀನಾಮೆ ನೀಡಿದರು. ಸರ್ಕಾರ ಎಂದರೆ ಕೇವಲ ಲೋಕ ಪಾಲ ಮಸೂದೆ ಅಷ್ಟೇ ಅಲ್ಲ. ಈ ಕಾರಣಕ್ಕಾಗಿ ನಾನು ಅವರಿಗೆ ಹೊಡೆದೆ’ ಎಂದಿದ್ದಾರೆ.
ಅಲ್ಲದೆ, ಕೇಜ್ರಿವಾಲ್ ಅವರು ಜನತಾ ದರ್ಬಾರ್ ಆಯೋಜಿಸಿದ್ದರು. ಆಗ ಅವರನ್ನು ಭೇಟಿ ಮಾಡುವ ಪ್ರಯತ್ನದಲ್ಲಿ ನನ್ನ ಇಡೀ ದಿನ ವ್ಯರ್ಥವಾಯಿತು. ನಾನು ಅವರನ್ನು ಭೇಟಿ ಮಾಡಲು ಸಾಧ್ಯವೇ ಆಗುವುದಿಲ್ಲವೇನೋ ಎಂದುಕೊಂಡೆ. ಅದೇ ವೇಳೆಗೆ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಬಗ್ಗೆ ಕೇಳಿದೆ. ಸಹಿಸಿಕೊಳ್ಳಲಾಗಲಿಲ್ಲ, ಸಿಟ್ಟಿನಿಂದ ಈ ರೀತಿ ಮಾಡಿದೆ' ಎಂದೂ ಲಲಿ ತಿಳಿಸಿದ್ದಾರೆ.