ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷರು ಹಾಗೂ ಸದಸ್ಯರ ಸ್ಥಾನ ಭರ್ತಿ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈ ಸದಸ್ಯರ ನೇಮಕ ಮಾಡುವ ಮುನ್ನ ಮುಖ್ಯಮಂತ್ರಿಗಳು ಆಯೋಗದ ಅಧ್ಯಕ್ಷರು, ಸದಸ್ಯರಾಗಲು ತೀವ್ರವಾದ ಲಾಬಿ ನಡೆಸುತ್ತಿರುವವರ ಪೂರ್ವಾಪರ, ದಕ್ಷತೆ, ಪ್ರಾಮಾಣಿಕತೆ, ಜನಸೇವೆಯ ಅಪೇಕ್ಷೆ ಹೀಗೆ ಹಲವು ಮಜಲುಗಳನ್ನು ಪರಾಮರ್ಶಿಸಿ ಯೋಗ್ಯರ ಆಯ್ಕೆ ಮಾಡಬೇಕು.
ಸರ್ಕಾರ ಯಾರ ಮರ್ಜಿಗೂ ಬಗ್ಗಬಾರದು. ಕೆಪಿಎಸ್ಸಿ ಈಗಾಗಲೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಾಳಿಭಾಗ್ಯದಂತಹ ಹಲವು ಅವ್ಯವಹಾರಗಳಿಂದ ನಲುಗಿ ಹೋಗಿದೆ. ಹೀಗೆ ನಲುಗಿ ಹೋಗಿರುವ ಕೆಪಿಎಸ್ಸಿಗೆ ಮುಖ್ಯಮಂತ್ರಿಗಳು ಸಣ್ಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೆಪಿಎಸ್ಸಿ ಶುದ್ಧೀಕರಣಕ್ಕಾಗಿ ಮುಂದೆಯೂ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆಂಬ ನಂಬಿಕೆ ಇದೆ. ಸದಸ್ಯರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿ ಹಳಿತಪ್ಪಿರುವ ಈ ಸಂಸ್ಥೆಯನ್ನು ಸರಿದಾರಿಗೆ ತರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿ.