ವಿಜಯಪುರ: ನಗರಕ್ಕೆ ಈಚೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಜಯಪುರ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ರಾಮಲಿಂಗ ಕೆರೆ ಪುನರುಜ್ಜೀವನಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ರಾಮಲಿಂಗ ಕೆರೆ 1800 ಎಕರೆಗಳಷ್ಟು ವಿಸ್ತಾರ ಹೊಂದಿದೆ. ಈ ಭೂಮಿ ಇದೀಗ ಪಟ್ಟಭದ್ರ ಹಿತಾಸಕ್ತಿಗಳ ಕೈವಶಕ್ಕೀಡಾಗಿದ್ದು, ಸಂಪೂರ್ಣ ಕೆರೆ ನಾಶವಾಗುತ್ತಿದೆ. ಈ ಸಾರ್ವಜನಿಕ ಕೆರೆ ರಕ್ಷಿಸಬೇಕು ಎಂದು ನಗರದಲ್ಲಿ ಈ ಹಿಂದೆ ಜನ ಸಂಪರ್ಕ ಸಭೆ ನಡೆಸಿದಾಗ ಮನವಿ ಮಾಡಿಕೊಳ್ಳಲಾಗಿತ್ತು.
ಇದರ ಜತೆಗೆ ಮಾನವ ಹಕ್ಕು ಆಯೋಗ, ಜಿಲ್ಲಾಡಳಿತ, ಕೇಂದ್ರ ಸರ್ಕಾರ, ಸ್ಥಳೀಯ ಸಚಿವರು, ಶಾಸಕರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರ ಜತೆಗೆ ಸರ್ಕಾರದ ನಿರ್ಲಕ್ಷ್ಯದಿಂದ 10ಕ್ಕೂ ಹೆಚ್ಚು ಐತಿಹಾಸಿಕ ಕೆರೆಗಳು ವಿನಾಶದ ಅಂಚಿನಲ್ಲಿವೆ. ಸುಪ್ರೀಂಕೋರ್ಟ್ ಆದೇಶದಂತೆ ಈ ಐತಿಹಾಸಿಕ ರಾಮಲಿಂಗ ಕೆರೆ ಸಂರಕ್ಷಿಸಿ ಪುನರುಜ್ಜೀವನಗೊಳಿಸಬೇಕು ಎಂದು ವಿಜಯಪುರ ಜಿಲ್ಲಾ ವಿಕಾಸ ವೇದಿಕೆ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ವಿನಂತಿಸಿದೆ.