ನವದೆಹಲಿ (ಪಿಟಿಐ/ಐಎಎನ್ಎಸ್): ಕೇಂದ್ರೀಯ ವಿದ್ಯಾಲಯಗಳ ೬ರಿಂದ ೮ನೇ ತರಗತಿ ಪಠ್ಯದಲ್ಲಿ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಬೋಧಿಸುವ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಚ್. ಎಲ್.ದತ್ತು ಅವರಿದ್ದ ಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಭಾಷೆಗೆ ಬದಲು ಸಂಸ್ಕೃತವನ್ನು ತೃತೀಯ ಭಾಷೆಯನ್ನಾಗಿ ಬೋಧಿಸುವ ನಿರ್ಧಾರದಿಂದ ಉಂಟಾದ ವಿವಾದದ ಕುರಿತು ಪ್ರಮಾಣಪತ್ರ ಸಲ್ಲಿಸುವುದಕ್ಕೆ ಅನುಮತಿ ಕೇಳಿದರು. ಇದಕ್ಕೆ ಅನುಮತಿ ನೀಡಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಈ ವಿಷಯವಾಗಿ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳ ಪೋಷಕರ ತಂಡವೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ನ. ೨೧ರಂದು ಕೋರ್ಟ್್ ಒಪ್ಪಿಕೊಂಡಿತ್ತು.