ರಾಂಪುರ (ಉತ್ತರಪ್ರದೇಶ),(ಪಿಟಿಐ): 2009ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಸ್ಥಳೀಯ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷ ಜೈಲು ಶಿಕ್ಷೆಗೆ ಜಿಲ್ಲಾ ನ್ಯಾಯಾಲಯ ತಡೆ ನೀಡಿದೆ.
ನಖ್ವಿ ವಿರುದ್ಧ ಪೊಲೀಸರು ಜರುಗಿಸಿರುವ ಕ್ರಮ ರಾಜಕೀಯ ಪ್ರೇರಿತವಾಗಿದೆ. ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳು ಇಲ್ಲ ಎಂದು ನಖ್ವಿ ವಕೀಲರು ವಾದಿಸಿದರು. ನಂತರಜಿಲ್ಲಾ ನ್ಯಾಯಾಧೀಶ ಪಿ.ಕೆ.ಗೋಯಲ್್ ಅವರು ನಖ್ವಿ ಅವರಿಗೆ ಜಾಮೀನು ನೀಡಿದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೪೩ (ಅಕ್ರಮವಾಗಿ ಗುಂಪು ಸೇರುವಿಕೆ), ೩೪೧ (ಅಕ್ರಮವಾಗಿ ಪ್ರತಿರೋಧ ಒಡ್ಡುವುದು), ೩೪೨ (ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳುವುದು) ಹಾಗೂ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ ಸೆಕ್ಷನ್ ೭ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೪೪ರ ಅಡಿಯಲ್ಲಿ ನಖ್ವಿ ಅವರು ತಪ್ಪಿತಸ್ಥರು ಎಂದು ಸ್ಥಳೀಯ ನ್ಯಾಯಾಲಯ ಹೇಳಿತ್ತು.
ಪೊಲೀಸರು ಹೇಳಿರುವಂತೆ ನಖ್ವಿ ಅವರಾಗಲೀ, ಪಕ್ಷದ ಇತರ ಕಾರ್ಯಕರ್ತರಾಗಲೀ ನಿಷೇಧಾಜ್ಞೆ ಉಲ್ಲಂಘಿಸಿರಲಿಲ್ಲ. ರಾಂಪುರ ಬಿಜೆಪಿ ಅಧ್ಯಕ್ಷರನ್ನು ಬಂಧಿಸಿದ್ದನ್ನು ವಿರೋಧಿಸಿ ಅವರೆಲ್ಲಾ ಅಂದು ಶಾಂತಿಯುತ ಪ್ರತಿಭಟನೆ ಮಾಡಿದ್ದರು ಎಂದು ನಖ್ವಿ ವಕೀಲರು ಕೋರ್ಟ್ಗೆ ತಿಳಿಸಿದರು. ಈ ಪ್ರಕರಣದಲ್ಲಿ ನಖ್ವಿ ಸೇರಿದಂತೆ ೨೦೦ ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.