ನವದೆಹಲಿ (ಪಿಟಿಐ): ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಜಾಮೀನು ಪಡೆಯಲು ವೈಯಕ್ತಿಕ ಬಾಂಡ್ ನೀಡದ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜೂನ್ 6ರವರೆಗೆ ವಿಸ್ತರಿಸಿರುವ ಕೋರ್ಟ್, ಕೇಜ್ರಿವಾಲ್ ಅವರನ್ನು ‘ಕಾನೂನು ಪರಿಜ್ಞಾನವಿಲ್ಲದವರು’ ಎಂದು ಛೀಮಾರಿ ಹಾಕಿದೆ.
ಜಾಮೀನು ಮಂಜೂರು ಮಾಡಲು ವಿಧಿಸಿದ್ದ ₨10 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸುವ ಷರತ್ತನ್ನು (ಮೇ 21ರ ಆದೇಶ) ಮರುಪರಿಶೀಲಿಸಲಾಗದು ಎಂದ ದೆಹಲಿ ಮೆಟ್ರೊಪಾಲಿಟನ್ ಕೋರ್ಟ್, ಈ ವಿಷಯದದಲ್ಲಿ ಆರೋಪಿ (ಕೇಜ್ರಿವಾಲ್) ವಿವೇಚನೆಯಿಂದ ವರ್ತಿಸುವುದು ಒಳಿತು ಎಂದು ಶುಕ್ರವಾರ ಹೇಳಿದೆ.
‘ಬುಧವಾರ ನೀಡಿದ್ದ ಆದೇಶದಲ್ಲಿ ಬದಲಾವಣೆ ಮಾಡಲಾರೆ. ನೀವು (ಕೇಜ್ರಿವಾಲ್ ಪರ ವಕೀಲರು) ಬೇಕಿದ್ದರೆ ಈ ಆದೇಶವನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದು ನ್ಯಾಯಾಧೀಶರಾದ ಗೋಮತಿ ಮನೋಚಾ ಅಭಿಪ್ರಾಯಪಟ್ಟರು. ‘ದೇಶದಲ್ಲಿ ಕಾನೂನು ಪರಿಜ್ಞಾನ ಇಲ್ಲದವರ ಸಂಖ್ಯೆ ಬಹಳಷ್ಟಿದೆ. ವಿದ್ಯಾವಂತರಿಗೂ ಕಾನೂನು ಪ್ರಕ್ರಿಯೆಗಳು ಗೊತ್ತಿಲ್ಲ. ಜಾಮೀನು ಮತ್ತು ವೈಯಕ್ತಿಕ ಬಾಂಡ್ಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದ ನೀವು (ಕೇಜ್ರಿವಾಲ್) ವಿವೇಚನೆಯಿಂದ ವರ್ತಿಸುತ್ತೀರೆಂದು ಎಣಿಸಿದ್ದೆ’ ಎಂದರು.
‘ನಿಮ್ಮ ಪಕ್ಷದವರೇ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆದಿರುವಾಗ ನಿಮಗೇನಡ್ಡಿ’ ಎಂದೂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಜ್ರಿವಾಲ್, ‘ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆಗಳು ಹೆಚ್ಚು ದಾಖಲಾಗಲು ಕಾರಣವೇನು ಮತ್ತು ನನ್ನಿಂದ ಆಗಿರುವ ತಪ್ಪಾದರೂ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇಂತಹ ಪ್ರಕರಣಗಳ ವಿಚಾರಣೆಗೆ ಹಾಜರಾಗುವುದಾಗಿ ಈ ಹಿಂದೆ ಮುಚ್ಚಳಿಕೆ ನೀಡಿದ್ದೆ. ಆಗ ನನ್ನನ್ನು ಬಂಧಿಸಿರಲಿಲ್ಲ’ ಎಂದರು.
‘ಸಮನ್ಸ್ ಜಾರಿಯಾಗಿರುವುದು ನೀವು ಆರೋಪಿ ಎಂದೇ ಹೊರತು, ತಪ್ಪಿತಸ್ಥರೆಂದಲ್ಲ. ನೀವು ವಿಚಾರಣೆ ಎದುರಿಸಬೇಕು... ಅದನ್ನು ಬಿಟ್ಟು ನಾನು ಮುಗ್ಧ, ನನ್ನನ್ನು ಬಿಟ್ಟುಬಿಡಿ ಎಂದು ಹೇಳಲಾಗದು. ಜಾಮೀನು ಬೇಕಿದ್ದರೆ ಷರತ್ತು ಪೂರೈಸಬೇಕು. ಅದೇ ರಿವಾಜು’ ಎಂದು ನ್ಯಾಯಾಧೀಶರು ತಿಳಿಹೇಳಿದರು.
ಇದಕ್ಕೂ ಮೊದಲು, ಮಾನನಷ್ಟ ಮೊಕದ್ದಮೆ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಅಗತ್ಯ ಇಲ್ಲ. ಜೊತೆಗೆ, ಜಾಮೀನು ಪಡೆಯಲು ವೈಯಕ್ತಿಕ ಬಾಂಡ್ ಸಲ್ಲಿಕೆಯೂ ಬೇಕಿಲ್ಲ’ ಎಂದು ಕೇಜ್ರಿವಾಲ್ ಪರ ವಕೀಲ ಶಾಂತಿ ಭೂಷಣ್ ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಗಡ್ಕರಿ ಪರ ವಕೀಲರಾದ ಪಿಂಕಿ ಆನಂದ್, ಕ್ರಿಮಿನಲ್ ಸ್ವರೂಪದ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳು ಆದೇಶವನ್ನು ಮರುಪರಿಶೀಲಿಸಲು ಆಗದು’ ಎಂದರು. ಈ ಮಧ್ಯೆ, ಕೇಜ್ರಿವಾಲ್ ಅವರ ಧೋರಣೆಯನ್ನು ಟೀಕಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್, ‘ಇದೊಂದು ರಾಜಕೀಯ ನಾಟಕ’ ಎಂದಿವೆ.
ಹಿನ್ನೆಲೆ: ಆಮ್ ಆದ್ಮಿ ಪಕ್ಷವು ಬಿಡುಗಡೆ ಮಾಡಿದ ‘ದೇಶದ ಕಡು ಭ್ರಷ್ಟರ’ ಪಟ್ಟಿಯಲ್ಲಿ ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಅವರನ್ನು ಹೆಸರಿಸಿತ್ತು. ಆದ್ದರಿಂದ ಗಡ್ಕರಿ ಅವರು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಮತ್ತಿತರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 500ನೇ ಕಲಂ ಅನ್ವಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮೇ 21ರಂದು ಈ ನಡೆದ ಪ್ರಕರಣದ ವಿಚಾರಣೆಯಲ್ಲಿ ₨10 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಿ ಜಾಮೀನು ಪಡೆಯಲು ಕೋರ್ಟ್ ಸೂಚಿಸಿತ್ತು. ಆದರೆ, ವೈಯಕ್ತಿಕ ಬಾಂಡ್ ಸಲ್ಲಿಸುವುದು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದುದು. ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಮುಚ್ಚಳಿಕೆ ನೀಡುವುದಾಗಿ ಕೇಜ್ರಿವಾಲ್ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದರು.
ಆದರೆ ಇದನ್ನು ಮಾನ್ಯ ಮಾಡದ ನ್ಯಾಯಾಲಯ,‘ಕಾನೂನು ಪ್ರಕ್ರಿಯೆಗ-ಳನ್ನು ಗಾಳಿಗೆ ತೂರಲಾಗದು ಮತ್ತು ಉದ್ದೇಶ ಪೂರ್ವಕವಾಗಿಯೇ ಇದನ್ನು ಉಲ್ಲಂಘಿಸುತ್ತಿದ್ದರೂ ನ್ಯಾಯಾಲಯ ಮೌನ ಪ್ರೇಕ್ಷಕನಂತಿರಲು ಸಾಧ್ಯವಿಲ್ಲ’ ಎಂದು ಹೇಳಿತ್ತು. ಕೇಜ್ರಿವಾಲ್ ಅವರನ್ನು ಮೇ 23ರವರೆಗೆ ಬಂಧನದಲ್ಲಿರಿಸುವಂತೆ ಸೂಚಿಸಿತ್ತು.
ಮೆಟ್ರೊಪಾಲಿಟನ್ ನ್ಯಾಯಾಲಯದ ಆದೇಶದಲ್ಲಿ ಬದಲಾವಣೆ ಆಗದಿದ್ದರೆ ಉನ್ನತ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ಕೇಜ್ರಿವಾಲ್ ಪರ ವಕೀಲರು ಗುರುವಾರ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.