ಬೆಂಗಳೂರು: ಕರ್ನಾಟಕದ ಪಿ.ಕೆ ಮಂಗಳಮಣಿ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಕರ್ನಾಟಕ ವೃತ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಮಂಡಳಿ ಹಾಗೂ ಬೆಂಗಳೂರು ಟೆಲಿಕಾಂ ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಮಂಡಳಿ ಸಹಯೋಗದಲ್ಲಿ ಇಲ್ಲಿ ನಡೆಯುತ್ತಿರುವ 14ನೇ ಅಖಿಲ ಭಾರತ ಬಿಎಸ್ಎನ್ಎಲ್ ಕೇರಂ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಮಂಗಳಮಣಿ 18–11, 25–5 ಬೋರ್ಡ್ಗಳಿಂದ ಮುಂಬೈನ ಅಮಿತಾ ಪರಬ್ ಎದುರು ಗೆಲುವು ದಾಖಲಿಸಿದರು.
ಇನ್ನೊಂದು ಪಂದ್ಯದಲ್ಲಿ ಕರ್ನಾಟಕದ ಎಮ್.ಡಿ ಮಾಲಿನಿ 5–25, 6–25 ಬೋರ್ಡ್ಗಳಿಂದ ಎನ್ಇ2 ನ ಗೀತಾ ದೇವಿ ಎದುರು ಸೋಲು ಕಂಡರು. ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಾಬು ಪ್ರಕಾಶ್ 20–18, 17–11 ಬೋರ್ಡ್ಗಳಲ್ಲಿ ಅಸ್ಸಾಂನ ಜಿಬನ್ ದೇಕಾ ಎದುರು ಗೆಲುವಿನ ನಗೆ ಬೀರಿದರು.