ನವದೆಹಲಿ: ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿ, ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದನಿ, ಆಯುರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಲು ತಮಗೆ ಅನುಮತಿ ನೀಡುವಂತೆ ಪ್ರಮಾಣ ಪತ್ರದಲ್ಲಿ ಮನವಿ ಮಾಡಿದ್ದಾರೆ. ತಾವು ಕಣ್ಣು ಮತ್ತು ಮಧುಮೇಹ ತೊಂದರೆಗೆ ಒಳಗಾಗಿದ್ದು, ಮಧುಮೇಹ ನಿಯಂತ್ರಣಕ್ಕೆ ಬರದೆ ಕಣ್ಣಿನ ಚಿಕಿತ್ಸೆ ಸಾಧ್ಯವಿಲ್ಲ ಎಂದು ಬೆಂಗಳೂರಿನ ವೈದ್ಯರು ಹೇಳಿದ್ದಾರೆ. ಆಯುರ್ವೇದ ಚಿಕಿತ್ಸೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರಲಿದೆ. ಹಿಂದೆಯೂ ತಾವು ಕೇರಳದಲ್ಲಿ ಈ ಚಿಕಿತ್ಸೆ ಪಡೆದಿದ್ದಾಗಿ ಮದನಿ ತಿಳಿಸಿದ್ದಾರೆ.
ಚಿಕಿತ್ಸೆಗಾಗಿ ತಮಗೆ ಜಾಮೀನು ನೀಡಲಾಗಿದ್ದು ಬೆಂಗಳೂರು ಬಿಡದಂತೆ ಷರತ್ತು ಹಾಕಲಾಗಿದೆ. ಕೇರಳದಲ್ಲಿ ಉತ್ತಮ ಆಯುರ್ವೇದ ಚಿಕಿತ್ಸೆ ದೊರೆಯಲಿದ್ದು, ಅಲ್ಲಿಗೆ ಹೋಗಲು ಅನುಮತಿ ನೀಡುವಂತೆ ಮದನಿ ಕೇಳಿದ್ದಾರೆ. ಅವರ ಅರ್ಜಿ ಈ ತಿಂಗಳ 19ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ.2008ರಲ್ಲಿ ಬೆಂಗಳೂರು ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮದನಿ ಪ್ರಮುಖ ಆರೋಪಿಯಾಗಿದ್ದಾರೆ.