ತಿರುವನಂಪುರ (ಪಿಟಿಐ): ಭೂ ಮಾಫಿಯಾದಿಂದ ಬೆಂಗಳೂರಿನಲ್ಲಿ ವಂಚನೆಗೆ ಒಳಗಾದ ಮಲಯಾಳಿಗಳ ನಿಯೋಗ ಸೋಮವಾರ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ಲಾಟ್ ಖರೀದಿಗೆಂದು ಹಣ ಹೂಡಿದ್ದ ಕೇರಳದ ಸುಮಾರು 450 ಮಂದಿಗೆ ರಾಜಕೀಯ ಪ್ರಭಾವ ಮತ್ತು ಅಧಿಕಾರಿಗಳ ಸಂಪರ್ಕ ಬಳಸಿ ನಕಲಿ ದಾಖಲೆಗಳನ್ನು ತೋರಿಸಿ ವಂಚಿಸಲಾಗಿದೆ ಎಂದು ಈ ನಿಯೋಗ ಆರೋಪಿಸಿದೆ.
ನಿಯೋಗದ ದೂರು ಆಲಿಸಿದ ಉಮ್ಮನ್ ಚಾಂಡಿ ಅವರು, ಈ ಕುರಿತು ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಯೋಗದ ಸದಸ್ಯರು, 1994ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಮೂಲಕ ಅನೇಕರು ಪ್ಲಾಟ್ಗಳನ್ನು ಖರೀದಿಸಿದ್ದರು. ಆದರೆ ಡೆವಲಪರ್ ಮೇಲೆ ಕೆಲವು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಖರೀದಿದಾರರನ್ನು ಆ ಪ್ಲಾಟ್ಗಳಿಂದ ಒಕ್ಕಲೆಬ್ಬಿಸಲಾಯಿತು ಈ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.