ನವದೆಹಲಿ (ಪಿಟಿಐ): ಯುಪಿಎ ಆಡಳಿತ ಅವಧಿಯಲ್ಲಿ ನೇಮಕವಾದ ರಾಜ್ಯಪಾಲರ ರಾಜೀನಾಮೆ ಸರಣಿ ಮುಂದುವರಿದಿದ್ದು ನಿರೀಕ್ಷೆಯಂತೆ ಕೇರಳ ರಾಜ್ಯಪಾಲರಾದ ಶೀಲಾ ದೀಕ್ಷಿತ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ‘ಸೋಮವಾರವೇ ರಾಜೀನಾಮೆ ಸಲ್ಲಿಸಿದ್ದು, ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ’ ಎಂದಿದ್ದಾರೆ.
ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಸಲ್ಲಿಸಿದವರ ಪೈಕಿ ಇವರು ಎಂಟನೆಯವರು. ಈ ಮೊದಲು ಮಿಜೋರಾಂಗೆ ವರ್ಗಾವಣೆಯಾದ ಮಹಾರಾಷ್ಟ್ರ ರಾಜ್ಯಪಾಲ ಶಂಕರನಾರಾಯಣನ್ ಸೇರಿ ಏಳು ರಾಜ್ಯಪಾಲರು ರಾಜೀನಾಮೆ ಸಲ್ಲಿಸಿದ್ದರು. ಇಬ್ಬರು ರಾಜ್ಯಪಾಲರನ್ನು ವಜಾ ಮಾಡಲಾಗಿತ್ತು.