ಸುಮಾರು ಎರಡೂವರೆ ದಶಕಗಳ ಕಾಲ ಶ್ರೀಲಂಕಾದ ಸೇನೆ ಮತ್ತು ಪ್ರತ್ಯೇಕತಾವಾದಿ ಸಂಘಟನೆ ಎಲ್ಟಿಟಿಇ ಮಧ್ಯೆ ನಡೆದ ಅಂತರ್ಯುದ್ಧ ಕೊನೆಗೊಂಡ ದಿನದಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈ ಕುರಿತಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್ಎಚ್ಆರ್ಸಿ) ಪದೇ ಪದೇ ಚರ್ಚೆಯಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಅವರು ಸಮಗ್ರ ತನಿಖೆ ನಡೆಸಬೇಕು ಎಂಬ ನಿರ್ಣಯವನ್ನು ಯುಎನ್ಎಚ್ಆರ್ಸಿ ಈ ಬಾರಿ ಅಂಗೀಕರಿಸಿದೆ. 47 ಸದಸ್ಯರಿರುವ ಮಂಡಳಿಯಲ್ಲಿ 23 ದೇಶಗಳು ನಿರ್ಣಯವನ್ನು ಬೆಂಬಲಿಸಿವೆ. 12 ದೇಶಗಳು ವಿರೋಧಿಸಿದ್ದರೆ ಭಾರತವೂ ಸೇರಿದಂತೆ 12 ದೇಶಗಳು ಮತದಾನದಿಂದ ದೂರ ಉಳಿದಿವೆ.
ಅಂತರ್ಯುದ್ಧದ ಕೊನೆಯ ಹಂತದಲ್ಲಿ ಏನು ಸಂಭವಿಸಿತು ಎಂಬುದರ ಕುರಿತಂತೆ ಈ ತನಕ ಹೊರಬಂದಿರುವ ಮಾಹಿತಿಗಳೆಲ್ಲವೂ ಶ್ರೀಲಂಕಾ ಸೇನೆ, ಸಾಮಾನ್ಯ ನಾಗರಿಕರ ಹತ್ಯೆ ನಡೆಸಿದೆ ಎಂದು ತಿಳಿಸಿವೆ. ಎಲ್ಟಿಟಿಇ ಕೂಡಾ ಹೀಗೆ ಸಾಮಾನ್ಯ ನಾಗರಿಕರ ಮೇಲೆ ನಡೆಸಿದ ದಾಳಿಗಳೇನೂ ಕಡಿಮೆಯಲ್ಲ. ಇದರ ಕುರಿತಂತೆ ಒಂದು ಬಾಹ್ಯ ಸಂಸ್ಥೆಯಿಂದ ತನಿಖೆ ನಡೆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆಯೇ ಎಂಬುದು ಇಲ್ಲಿರುವ ಮುಖ್ಯಪ್ರಶ್ನೆ. ಇಂಥದ್ದೊಂದು ತನಿಖೆಯನ್ನು ಒಪ್ಪಲು ಸಾಧ್ಯವಿಲ್ಲ ಎಂಬುದನ್ನು ಶ್ರೀಲಂಕಾ ಸ್ಪಷ್ಟಪಡಿಸಿದೆ. ಅಮೆರಿಕ ಮತ್ತು ಯೂರೋಪಿನ ದೇಶಗಳು ಈ ತನಿಖೆಗೆ ಒತ್ತಡ ಹೇರುತ್ತಿವೆ.
ಈ ವಿಚಾರದಲ್ಲಿ ಭಾರತ ಮೊದಲಿನಿಂದಲೂ ಎಡಬಿಡಂಗಿ ನಿಲುವು ಪ್ರದರ್ಶಿಸುತ್ತಾ ಬಂದಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಎಲ್ಟಿಟಿಇಗೆ ಪರೋಕ್ಷ ಬೆಂಬಲ ನೀಡಲಾಯಿತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಶಾಂತಿ ಪಡೆ ಕಳುಹಿಸಿ ಶ್ರೀಲಂಕಾ ತಮಿಳರ ಪ್ರಶ್ನೆಯನ್ನು ಸಂಕೀರ್ಣಗೊಳಿಸಿತು. ಮೈತ್ರಿಕೂಟ ಸರ್ಕಾರಗಳ ಯುಗ ಆರಂಭವಾದ ನಂತರ ಆಡಳಿತಾರೂಢರಿಗೆ ಬೆಂಬಲ ನೀಡಿರುವ ತಮಿಳುನಾಡಿನ ರಾಜಕೀಯ ಪಕ್ಷಗಳ ಒಲವನ್ನು ಅರಿತು ಶ್ರೀಲಂಕಾಕ್ಕೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಕಾರ್ಯ ಆರಂಭವಾಯಿತು. ಇವೆಲ್ಲವುಗಳ ಒಟ್ಟು ಪರಿಣಾಮವೆಂದರೆ ಭಾರತದ ಬಗ್ಗೆ ಶ್ರೀಲಂಕಾದ ಸಿಂಹಳೀಯ ಸಮುದಾಯಕ್ಕೆ ಒಳ್ಳೆಯ ಅಭಿಪ್ರಾಯವಿಲ್ಲ.
ಭಾಷೆಯ ಮೂಲಕ ಕರುಳುಬಳ್ಳಿ ಸಂಬಂಧವನ್ನು ಹೊಂದಿರುವ ತಮಿಳು ಸಮುದಾಯವೂ ಭಾರತವನ್ನು ದ್ವೇಷಿಸಬಹುದಾದ ನಿಲುವುಗಳನ್ನು ಸರ್ಕಾರಗಳು ಕೈಗೊಂಡಿವೆ. 2009ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಶ್ರೀಲಂಕಾವನ್ನೇ ಬೆಂಬಲಿಸಿದ್ದ ಭಾರತ, 2012 ಮತ್ತು 2013ರಲ್ಲಿ ಶ್ರೀಲಂಕಾ ವಿರೋಧಿ ನಿಲುವನ್ನು ತಳೆಯಿತು. 2014ರಲ್ಲಿ ಮತದಾನದಿಂದ ದೂರ ಉಳಿದು ತಟಸ್ಥ ನಿಲುವು ತಳೆದಿದೆ.
ಡಿಎಂಕೆ ಸದ್ಯ ಕಾಂಗ್ರೆಸ್ನಿಂದ ದೂರವಾಗುತ್ತಿರುವುದು ಸದ್ಯದ ತಟಸ್ಥ ನಿಲುವಿನ ಹಿಂದೆ ಕೆಲಸ ಮಾಡಿರುವುದು ಸ್ಪಷ್ಟ. ಇಂಥ ನಿರ್ಧಾರಗಳು ರಾಜತಾಂತ್ರಿಕ ಅಪ್ರಬುದ್ಧತೆಯ ಉದಾಹರಣೆಗಳಾಗಿಬಿಡುತ್ತವೆ. ಇಷ್ಟರ ಮೇಲೆ ವಿಶ್ವಸಂಸ್ಥೆ ನಡೆಸಿದ ಬಾಹ್ಯ ತನಿಖೆಯಿಂದ ಈ ತನಕ ಯಾವುದೇ ಸಂತ್ರಸ್ತ ಸಮುದಾಯಕ್ಕೆ ನ್ಯಾಯ ದೊರೆತ ಉದಾಹರಣೆಯಂತೂ ಇಲ್ಲ. ಶ್ರೀಲಂಕಾದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಯುಎನ್ಎಚ್ಆರ್ಸಿ ನಿರ್ಣಯ ಜಾರಿ ಪರಿಣಾಮ ಇದಕ್ಕಿಂತ ಭಿನ್ನವಾಗಲು ಸಾಧ್ಯವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.